
ಬೆಂಗಳೂರು: ಯಾವುದೇ ವಾಹವನವನ್ನು ಟೋಯಿಂಗ್ ಮಾಡುವ ಪೂರ್ವದಲ್ಲಿ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಗಳಿಂದ, ಸಾರ್ವಜನಿಕರಿಗಾಗುತ್ತಿರುವ ಕಿರುಕುಳದ ಬಗ್ಗೆ ಕೇಳಿ ಬಂದ ಆಪಾದನೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಹೆಚ್ಚುವರಿ ಆಯುಕ್ತ (ಸಂಚಾರ) ರವಿಕಾಂತೇ ಗೌಡ ಜೊತೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.
ವಾಹನ ಟೋಯಿಂಗ್ ಮಾಡಬೇಕಾದ ಸಂಧರ್ಭದಲ್ಲಿ ತೆಗೆಳುಕೊಳ್ಳಬೇಕಾದ ಎಲ್ಲಾ ನಿಯಾಮಾವಳಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ.
ಇನ್ನು ಮುಂದೆ ಯಾವುದೇ ಸಂಧರ್ಭದಲ್ಲಿ ಟ್ರಾಫಿಕ್ ಪೊಲೀಸರು ವಾಹನ ವನ್ನು ಹೊತ್ತೊಯ್ಯುವ ಸಮಯದಲ್ಲಿ ವಾಹನದ ಮಾಲೀಕರು ಸ್ಥಳದಲ್ಲಿದ್ದರೆ ಕೇವಲ ‘ನೋ ಪಾರ್ಕಿಂಗ್’ ಶುಲ್ಕದ ಹಣವನ್ನು ಮಾತ್ರ ಪಡೆದುಕೊಳ್ಳಬೇಕು ಹಾಗೂ ವಾಹನವನ್ನು ಅಲ್ಲಿಯೇ ಅವರಿಗೆ ಬಿಟ್ಟು ಕೊಡಬೇಕು ಮತ್ತು ಟೋಯಿಂಗ್ ಮಾಡಬಾರದು ಎಂದು ಸೂಚಿಸಿದ್ದಾರೆ.
ಟೋಯಿಂಗ್ ಸಿಬ್ಬಂದಿ ಗಳು ಸಾರ್ವಜನಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಟೋಯಿಂಗ್ ಮಾಡಲಾಗುವ ವಾಹನಗಳನ್ನು ಅತ್ಯಂತ ಜಾಗರೂಕತೆಯಿಂದ ಯಾವುದೇ ಹಾನಿ ಗೊಳಗಾಗದಂತೆಯೂ ನೋಡಿಕೊಳ್ಳಬೇಕು ಎಂದೂ ಸಚಿವ ಅರಗ ಹೇಳಿದ್ದಾರೆ.



