ಆನೆ ದಾಳಿ; ತೋಟ ನಾಶ

ರಾಮನಗರ: ಕೈಲಾಂಚ ಹೋಬಳಿಯ ಕಾಡನಕುಪ್ಪೆ-ಹೊಸದೊಡ್ಡಿ ಗ್ರಾಮಗಳಲ್ಲಿ ಏಳೆಂಟು ಆನೆಗಳ ದಾಳಿ ಮುಂದುವರೆದಿದ್ದು ರೈತರಬಾಳೆ, ತೆಂಗು, ಮಾವು, ಬೋರ್ವೆಲ್ ನೀರಾವರಿ ಪರಿಕರ ನಾಶಪಡಿಸಿ, ಫಸಲನ್ನು ತಿಂದು ಅಪಾರ ಪ್ರಮಾಣದಲ್ಲಿ ಎರಡೂ ಗ್ರಾಮಗಳ ರೈತರಿಗೆ ನಷ್ಟುಉಂಟುಮಾಡಿ ಹೋಗಿವೆ.
ಕಾವೇರಿ ವನ್ಯಜೀವಿ ಧಾಮದಿಂದ ಕಳೆದ ಎರಡುಮೂರು ತಿಂಗಳ ಹಿಂದೆ ಬಂದ ಆನೆಗಳ ಹಿಂಡು ವಾಪಸ್ ಸ್ವಸ್ಥಾನ ಸೇರದೆ ತೆಂಗಿನಕಲ್ಲು ಅರಣ್ಯವನ್ನೇ ವಾಸಸ್ಥಳವನ್ನಾಗಿ ಮಾಡಿಕೊಂಡು ಮೂರು, ನಾಲ್ಕು, ಎರಡು ಹೀಗೆ ಗುಂಪುಗಳಾಗಿ ವಿಂಗಡಣೆಯಾಗಿ ಅರಣ್ಯದಂಚಿನ ಕಾಡನಕುಪ್ಪೆ, ಹೊಸದೊಡ್ಡಿ, ಕುರುಬಳ್ಳಿದೊಡ್ಡಿ,ತೆಂಗಿನಕಲ್ಲು, ದೇವರದೊಡ್ಡಿ, ನೆಲಮಲೆ, ದೊಡ್ಡನಹಳ್ಳಿ ಗ್ರಾಮಗಳ ಆಸುಪಾಸಿನಲ್ಲಿ ಇಷ್ಟಾನುಸಾರ ಓಡಾಟ ನಡೆಸಿ ರೈತರ ಫಸಲುಗಳಾದ ಮಾವು, ತೆಂಗಿನ ಮರ, ಬೋರ್ವೆಲ್ ಪರಿಕರ ನಾಶಪಡಿಸುತ್ತಿವೆ.
ಇತ್ತೀಚಿಗಷ್ಟೇ ಮಧ್ಯಾಹ್ನವೇ ದೊಡ್ಡನಹಳ್ಳಿ ಗ್ರಾಮದಲ್ಲಿರೈತ ಸತೀಶ್ 35) ಎಂಬುವರು ತಮ್ಮ ಮಾವಿನತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆನೆ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ರೈತನನ್ನು ಬಲಿಪಡೆದ ಆನೆಗಳ ಹಿಂಡು ಅರಣ್ಯ ಸೇರಿದ್ದವು.
ಮತ್ತೆ ರಾತ್ರಿ ವೇಳೆದಾಳಿ ನಡೆಸಿದ ಆನೆಗಳ ಹಿಂಡು ಹೊಸದೊಡ್ಡಿ ಗ್ರಾಮದ ಗೋಪಾಲ್ ಎಂಬುವರ ಬೋರ್ವೆಲ್ ನೀರಿನ ಪೈಪು,ವಿದ್ಯುತ್ ಪರಿಕರ, ಬೋರ್ವೆಲ್ ಮೋಟಾರ್,ಮಾವಿನಮರ, ಕಾಡನಕುಪ್ಪೆ ಗ್ರಾಮದ ಚನ್ನೇಗೌಡ ಎಂಬರೈತರ ಬಾಳೆಗಿಡ, ಬೋರ್ವೆಲ್ ಪೈಪು, ಹನಿ ನೀರಾವರಿ ಪೈಪು, ಕಾಡೇಗೌಡ ಎಂಬುವರ ಹಲಸಿನಮರ, ೨೦ಕ್ಕೂಹೆಚ್ಚಿನ ಮಾವಿನಮರ, ಬೋರ್ವೆಲ್ ಪೈಪುಗಳನ್ನು ನಾಶಪಡಿಸಿವೆ.
ಪದೇ ಪದೆ ಆನೆಗಳ ಉಪಟಳ ಹೆಚ್ಚಾಗಿದೆ ವರ್ಷಾನುಗಟ್ಟಲೆ ಕಷ್ಟಪಟ್ಟು ನೀರುಣಿಸಿ ಸಾವಿರಾರು ರೂ ಖರ್ಚುಮಾಡಿ ಲಾಭ ತರುವ ಜೀವನ ನಿರ್ವಹಣೆಗೆ ಇರುವ ತೆಂಗು, ಮಾವಿನ ಮರಗಳು ನೀರಾ ವರಿ ಪರಿಕರಗಳು, ಫಸಲು ಆನೆಗಳಿಂದ ನಾಶವಾಗುತ್ತಿವೆ ಜೊತೆಗೆ ಮಾನವರ ಮೇಲೆ ದಾಳಿ ಮಾಡುತ್ತಿವೆ ಇದರಿಂದ ಬೆಳಗಿನ ವೇಳೆಯಲ್ಲಿ ಕೃಷಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಅರಣ್ಯ ಇಲಾಖೆ ಆಗಿರುವ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು, ಆನೆಗಳನ್ನು ತೆಂಗಿನಕಲ್ಲು ಅರಣ್ಯದಿಂದ ಅವುಗಳ ಸ್ವಸ್ಥಾನ ಸೇರಿಸುವ ಕೆಲಸ ಮಾಡಬೇಕು ಎಂದು ಹೊಸದೊಡ್ಡಿ ಗ್ರಾಮದ ಗೋಪಾಲ್, ಯೋಗೇಶ್, ಕಾಡನಕುಪ್ಪೆ ಸತೀಶ್ ಆಗ್ರಹಿಸಿದ್ದಾರೆ.




