ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಂತೆ ಶಿಕಾರಿಪುರದಲ್ಲಿ ಭುಗಿಲೆದ್ದ ಆಕ್ರೋಶ…!

ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಿದ್ದಂತೆ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಶಿಕಾರಿಪುರ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ನೀರವ ಮೌನ ಆವರಿಸಿದೆ. ಎರಡು ವರ್ಷಗಳ ಕಾಲ ಕೋವಿಡ್, ನೆರೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ನಡುವೆಯೂ ಅತ್ಯುತ್ತಮ ಆಡಳಿತ ನೀಡಿರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಹಾಕಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಮಾಯಿಸಿದ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಆಕ್ರೋಶ ಹೊರಹಾಕಿದರು.
ಪಕ್ಷ ಕಟ್ಟಿದ ನಾಯಕರಲ್ಲಿ ಯಡಿಯೂರಪ್ಪ ಅವರು ಪ್ರಮುಖರು. ಅವರು ಕಟ್ಟಿರುವ ಕೋಟೆಯಲ್ಲಿ ಮತ್ತೊಬ್ಬರು ಅಧಿಕಾರ ನಡೆಸೋಕೆ ಮುಂದಾಗಿರೋದು ದುರಂತ. ಇದನ್ನು ತೀರ್ವವಾಗಿ ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.
ಯಡಿಯೂರಪ್ಪ ರಾಜೀನಾಮೆ ನೀಡಿರೋ ಕಾರಣ ಪಟ್ಟಣದಲ್ಲಿ ಸ್ಮಶಾನ ಮೌನವಾಗಿದೆ. ಬಿಎಸ್ವೈ ರಾಜೀನಾಮೆ ಬಿಜೆಪಿಯ ಸರ್ವನಾಶಕ್ಕೆ ನಾಂದಿಯಾಗಿದೆ, ಬಿಜೆಪಿಯವರಿಗೆ ತಾಕತ್ ಇದ್ದಲ್ಲಿ ಸ್ವಂತಬಲದಿಂದ ಪಕ್ಷಕಟ್ಟಿ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಯಡಿಯೂರಪ್ಪನವರು ಕಟ್ಟಿರುವ ಪಕ್ಷದಲ್ಲಿ ಅಧಿಕಾರ ನಡೆಸಲು ಹಕ್ಕಿಲ್ಲ ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕಿದರು.
