ಎಡೆಬಿಡದ ಮಳೆ: ದ.ಕ.ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿತ

ಮಂಗಳೂರು: ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಿಂದ ಹಾನಿ, ಅವಘಡಗಳು ಸಂಭವಿಸಿವೆ. ಮಳೆಯೊಂದಿಗೆ ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಉರುಳಿದ್ದು, 5ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಕುಸಿದಿವೆ, 15ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಮನೆಯೊಂದರಲ್ಲಿದ್ದ ವ್ಯಕ್ತಿಗೆ ಗಾಯವಾಗಿದೆ. ಉಳಿದಂತೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೇತ್ರಾವತಿ, ಫಲ್ಗುಣಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಮಳೆ ಹೀಗೇ ಮುಂದುವರಿದರೆ ಪ್ರವಾಹ ಉಕ್ಕುವ ಆತಂಕ ಎದುರಾಗಿದೆ. ಸಮುದ್ರ ತೀರದಲ್ಲಿ ಅಲೆಗಳ ಅಬ್ಬರದಿಂದ ಕಡಲ್ಕೊರೆತ ಆರಂಭವಾಗಿದೆ. ಮೀನುಗಾರರು ಸಹಿತ ಯಾರೂ ಸಮುದ್ರತ್ತ ಕಾಲಿಡದಂತೆ ಸೂಚಿಸಲಾಗಿದೆ. ಅಲ್ಲಲ್ಲಿ ಮರಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ.
ಹಲವೆಡೆ ಗದ್ದೆಗಳಿಗೆ ನೀರು ನುಗ್ಗಿ ಕೃಷಿ ಚಟುವಟಿಕೆ ಸ್ತಬ್ದಗೊಂಡಿದೆ. ನಗರದ ಹಲವೆಡೆ ರಸ್ತೆಗಳೆಲ್ಲವೂ ಮುಚ್ಚಿಹೋಗುವಂತೆ ಮಳೆ ನೀರು ಪ್ರವಾಹವಾಗಿ ಹರಿಯತೊಡಗಿದೆ. ಕರಾವಳಿ ಭಾಗದಲ್ಲಿ ಜು.18ರವರೆಗೆ ಧಾರಾಕಾರ ಮಳೆ ಮುಂದುವರಿಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
