ಕಮ್ಮಿಯಾಯ್ತು ನಂದಕಿಶೋರ್ ‘ಪೊಗರು’!

ಪೂರ್ಣ ವಿ-ರಾಮ
ಪೊಗರು ಸಿನೆಮಾ ಚೆನ್ನಾಗಿ ಆಗಿದ್ದರೆ, ನಿರೀಕ್ಷೆಗೆ ತಕ್ಕಂತೇ ಓಡಿದ್ದರೆ ಇಷ್ಟೊತ್ತಿಗೆ ಧ್ರುವಾ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಸೇರಿ ದುಬಾರಿ ಎಂಬ ಸಿನೆಮಾ ಶುರುಮಾಡಿ, ಅರ್ಧ ಮುಗಿಸಿರಬೇಕಿತ್ತು. ಇಡೀ ಪೊಗರು ಸಿನೆಮಾದಲ್ಲಿ ದಡಬಡದಡಬಡ ಅಬ್ಬರ ಬಿಟ್ಟರೆ ಬೇರೇನೂ ಇಲ್ಲದಿದ್ದರೂ ಅದು ಕಲೆಕ್ಷನ್ ವಿಚಾರದಲ್ಲಿ ಸೋಲಲಿಲ್ಲ. ಎರಡು ವಾರ ಚೆನ್ನಾಗಿ ಕಲೆಕ್ಷನ್ ಮಾಡಿತು. ಜೊತೆಗೆ ಜನ ಲಾಕ್ ಡೌನ್ ಇಂದ ರೋಸಿ ಹೋಗಿದ್ದ ಕಾರಣಕ್ಕೆ ನುಗ್ಗಿ ಥಿಯೇಟರ್ ಕಡೆ ಬಂದರು.
ಧ್ರುವಾಗೆ ಪೊಗರು ಇಷ್ಟವಾಗಲಿಲ್ಲವೇನೋ!
ಬಿಜಿನೆಸ್ ವಿಷಯ ಹೊರತಾಗಿ ಕಂಟೆಂಟ್ ವಿಷಯಕ್ಕೆ ಖುದ್ದು ಧ್ರುವಾ ಸರ್ಜಾ ನಿರ್ದೇಶಕರ ಕೆಲಸದ ಕ್ವಾಲಿಟಿ ಮೇಲೆ ಬೇಸರಗೊಂಡು ಮುಂದೆ ಶುರುವಾಗಬೇಕಿದ್ದ ಸಿನೆಮಾವನ್ನು ಅಲ್ಲಿಗೇ ನಿಲ್ಲಿಸುವಂತೆ ನಿರ್ಮಾಪಕ ಉದಯ್ ಮೆಹ್ತಾ ಅವರಿಗೆ ಮೆಸೇಜ್ ಕೊಟ್ಟರು. ಅಲ್ಲಿಗೆ ಆಗಬೇಕಿದ್ದ ದುಬಾರಿ ಸಿನೆಮಾ ಕಥೆ ಮುಗಿದಂತಾಯಿತು….
ರಾಣಾ ಕಡೆ ಶಿಫ್ಟ್ ಆದ ನಂದಕಿಶೋರ!
ಸಿನೆಮಾ ಬಿಟ್ಟು ತನಗೆ ಇನ್ನೇನೂ ಗೊತ್ತಿಲ್ಲ ಎನ್ನುವ ನಂದಕಿಶೋರ್, ನಿರ್ಮಾಪಕ ಕೆ. ಮಂಜು ಮಗನನ್ನ ಹೀರೋ ಮಾಡಿ ಇದೀಗ ರಾಣಾ ಸಿನೆಮಾ ಮಾಡುತ್ತಿದ್ದಾರೆ. ಅಸಲಿಗೆ ರಾಣಾ ಟೈಟಲ್ ಇಟ್ಟುಕೊಂಡು ಯಶ್ ಸಿನೆಮಾ ಮಾಡಬೇಕಿತ್ತು ನಿರ್ದೇಶಕ ಹರ್ಷ. ಅದ್ಯಾಕೋ ಬರೀ ಪೋಸ್ಟರ್ ಲೆವೆಲ್ಲಿಗೇ ನಿಂತುಹೋಯಿತು. ಕೊನೆಗೆ ಆ ಟೈಟಲ್ ಅನ್ನು ಕೆ ಮಂಜು ಪಡೆದುಕೊಂಡು ಇದೀಗ ನಂದಕಿಶೋರ್ ಅವರಿಗೆ ಸಿನೆಮಾ ಮಾಡಿ ಎಂದು ಮುಂದೆಬಿಟ್ಟಿದ್ದಾರೆ. ನಂದಕಿಶೋರ್ ಸಿನೆಮಾ ಮೇಕಿಂಗ್ ತುಂಬಾ ಹಿಂದೆ ಚೆನ್ನಾಗಿತ್ತು. ವಿಕ್ಟರಿ, ಅಧ್ಯಕ್ಷ ಸಿನೆಮಾ ಟೈಮಲ್ಲಿ ಅವರಿಗೆ ತುಂಬಾ ತಾಳ್ಮೆ ಇತ್ತು. ಪೊಗರು ಚಿತ್ರದಲ್ಲಿ ಅದ್ಯಾಕೆ ತುಸು ಎಡವಿದರೋ ಗೊತ್ತಿಲ್ಲ. ಏಳು ಬೀಳು ಇದ್ದಿದ್ದೇ. ರಾಣಾ ಚಿತ್ರದಲ್ಲಿ ಮತ್ತೆ ಏಳಲಿ, ಏಳು ವಾರ ಯಶಸ್ವೀ ಓಡುವ ಸಿನೆಮಾ ಮಾಡಲಿ. ರಾಣಾ ತಂಡಕ್ಕೆ ಒಳ್ಳೇದಾಗಲಿ…!




