
ನವದೆಹಲಿ: ಅಧಿಕಾರ ವಹಿಸಿಕೊಂಡ ನಾಲ್ಕೇ ತಿಂಗಳಲ್ಲಿ ಉತ್ತರಾಖಂಡ್ ಸಿಎಂ ತೀರತ್ ಸಿಂಗ್ ರಾವತ್ ಶುಕ್ರವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ, ಅವರ ಸೂಚನೆಯಂತೆ ರಾವತ್ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚಟುವಟಿಕೆಗೆ ತಿರುವು ಸಿಕ್ಕಿದೆ.
ಕಳೆದ ಮೂರು ದಿನಗಳಿಂದಲೂ ರಾವತ್ ಪಕ್ಷದ ವರಿಷ್ಠರ ಭೇಟಿಗಾಗಿ ಕಾದಿದ್ದರು. ರಾಜೀನಾಮೆ ಸೂಚನೆ ಸಿಕ್ಕಿದ ತಕ್ಷಣವೇ ಅವರು ಗವರ್ನರ್ ಭೇಟಿಗೂ ಮೊದಲೇ ತಮ್ಮ ರಾಜೀನಾಮೆ ಪತ್ರವನ್ನು ನಡ್ಡಾ ಅವರಿಗೆ ಒಪ್ಪಿಸಿದರು.
ಉತ್ತರಾಖಂಡ್ ಬಿಜೆಪಿ ಶಾಸಕರು ಇಂದು ಹೊಸ ನಾಯಕನ ಆಯ್ಕೆಗಾಗಿ ಸಭೆ ಸೇರಲಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆ
ಸಂಸದರಾಗಿದ್ದ ರಾವತ್ ಸೆಪ್ಟೆಂಬರ್ 10ರೊಳಗೆ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಉಪಚುನಾವಣೆ ನಡೆಯಲಿಲ್ಲ. ಅಲ್ಲದೆ ಬರುವ ಮಾರ್ಚ್ನಲ್ಲಿಯೇ ಪ್ರಸಕ್ತ ವಿಧಾನಸಭೆ ಅವಧಿ ಪೂರ್ಣಗೊಂಡು ಮತ್ತೆ ಚುನಾವನೆ ನಡೆಯಬೇಕಿರುವುದರಿಂದ, ಉಪಚುನಾವಣೆ ನಡೆಸುವ ಸಾಧ್ಯತೆ ಕಡಿಮೆ.
ಜನಪ್ರತಿನಧಿಗಳ ಕಾಯ್ದೆಯನ್ವಯ, ವಿಧಾನಸಭೆಯ ಖಾಲಿ ಸ್ಥಾನಗಳನ್ನು ಆರು ತಿಂಗಳೊಳಗೆ ಚುನಾವಣೆ ನಡೆಸಿ ಭರ್ತಿ ಮಾಡಬೇಕು ಮತ್ತು ಆಯ್ಕೆಯಾದ ಸದಸ್ಯರ ಅವಧಿ ಒಂದು ವರ್ಷ ಇಲ್ಲವೆ ಅದಕ್ಕಿಂತ ಹೆಚ್ಚು ಇರಬೇಕು. ಇದೆಲ್ಲ ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾವತ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.



