ಬಾಲಿವುಡ್ನಿಂದ ಆಫರ್ ಬಂದಿದ್ದು ನಿಜ, ಕನ್ನಡಕ್ಕೆ ಮೊದಲ ಆದ್ಯತೆ: ರಿಷಬ್ ಶೆಟ್ಟಿ

ಮುಂಬೈ: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಕಾಂತಾರ’ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿಗೆ ಬಾಲಿವುಡ್ನಿಂದ ಹಲವು ಆಫರ್ಗಳು ಬರುತ್ತಿವೆ.
ಈ ಕುರಿತು ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ರಿಷಬ್, ‘ಬಾಲಿವುಡ್ನಿಂದ ಆಫರ್ಗಳು ಬಂದಿರುವುದು ನಿಜ’ ಎಂದಿದ್ದಾರೆ.
‘ನನಗೆ ಬಾಲಿವುಡ್ ನಿರ್ಮಾಪಕರಿಂದ ಆಫರ್ಗಳು ಬಂದಿವೆ. ಆದರೆ, ಇದೀಗ ನಾನು ಕನ್ನಡದಲ್ಲಿ ಮಾತ್ರ ಚಲನಚಿತ್ರಗಳನ್ನು ಮಾಡಲು ಬಯಸುತ್ತೇನೆ. ನಾನು ಅಮಿತಾಭ್ ಬಚ್ಚನ್ ಅವರನ್ನು ಇಷ್ಟಪಡುತ್ತೇನೆ. ಜತೆಗೆ, ಯುವ ನಟರಾದ ಶಾಹಿದ್ ಕಪೂರ್, ಸಲ್ಮಾನ್ ಭಾಯ್ ನಟನೆಯ ಚಿತ್ರಗಳನ್ನು ನೋಡಿದ್ದೇನೆ’ ಎಂದು ರಿಷಬ್ ಹೇಳಿಕೊಂಡಿದ್ದಾರೆ.
‘ಕಾಂತಾರ’ ಚಿತ್ರದ ಮುಂದುವರಿದ ಭಾಗದ ಬಗ್ಗೆ ಮಾತನಾಡಿರುವ ರಿಷಬ್, ‘ನಾನು ಅದರ ಬಗ್ಗೆ ಇನ್ನೂ ಯೋಚಿಸಿಲ್ಲ. ಹಾಗಾಗಿ ಅಂತಹ ದಿನ ಬಂದರೆ ನೋಡೋಣ’ ಎಂದಿದ್ದಾರೆ.
ಸೆಪ್ಟೆಂಬರ್ 30ರಂದು ಬಿಡುಗಡೆಯಾದ ‘ಕಾಂತಾರ’ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ವರದಿಗಳ ಪ್ರಕಾರ ₹300 ಕೋಟಿ ಗಳಿಕೆ ಕಂಡಿದೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಬಾಲಿವುಡ್ ನಟಿ ಕಂಗನಾ ಸೇರಿದಂತೆ ಅನೇಕ ಪರ ಭಾಷಾ ನಟ -ನಟಿಯರು ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
