ಯುವರಾಜ್ ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದ ಗಡಿಗುಡಾಳ್ ಮಂಜುನಾಥ್

ದಾವಣಗೆರೆ: ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವರನಟ ಡಾ. ರಾಜ್ ಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ನಟನೆಯ ಸಿನಿಮಾದ ಪೋಸ್ಟರ್ ಅನ್ನು ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಬಿಡುಗಡೆ ಮಾಡಿದರು.
ಪಾಲಿಕೆಯ 38ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಪಾರ್ಕ್ ನಲ್ಲಿನ “ಪುನೀತ್ ಆನಂದಗೂಡು” ಉದ್ಯಾನವನದಲ್ಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುತ್ಥಳಿಯ ಮುಂದೆ ಯುವರಾಜ್ ಕುಮಾರ್ ಪೋಸ್ಟರ್ ಅನಾವರಣಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್, ಕರ್ನಾಟಕ ಚಿತ್ರರಂಗ ಮಾತ್ರವಲ್ಲ, ವಿಶ್ವವನ್ನೇ ಮೆಚ್ಚುವಂತೆ ಮಾಡಿದ್ದ ರಾಜ್ಕುಮಾರ್ ಅವರ ಮೊಮ್ಮಗ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಗೆ ಯಶಸ್ಸು ಸಿಗಲಿ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜಕುಮಾರ್ ಅವರಂತೆ ದೊಡ್ಡ ಹೆಸರು ಮಾಡಲಿ. ಪುನೀತ್ ಪುತ್ಥಳಿ ಮುಂದೆ ಪೋಸ್ಟರ್ ಅನಾವರಣಗೊಳಿಸಲಾಗಿದೆ. ಯುವರಾಜ್ ಕುಮಾರ್ ನಟನೆಯ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಕನ್ನಡ ಚಿತ್ರರಂಗ ಎಲ್ಲರನ್ನೂ ಅಪ್ಪಿದೆ. ರಾಜ್ ಕುಟುಂಬ ಎಂದರೆ ಎಲ್ಲರಿಗೂ ಗೌರವ, ಪ್ರೀತಿ. ರಾಜ್ ಕುಟುಂಬದ ಮೂರನೇ ಕುಡಿ ಯುವರಾಜ್ ಕುಮಾರ್. ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಹೆಸರು ಮಾಡುವ ಭರವಸೆ ಮೂಡಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಮಾಡಿರುವಂತೆಯೇ ಯುವರಾಜ್ ಸಹ ಸೇವೆ ಹಾಗೂ ನಟನೆ ಮಾಡಲಿ. ಅಪ್ಪು ಅಭಿಮಾನಿಗಳು ಯುವರಾಜ್ ಕುಮಾರ್ ಸಿನಿಮಾವನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರಲ್ಲದೇ, ಯುವರಾಜ ಸೇನೆಯು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
