ಟ್ರ್ಯಾಕ್ಟರ್ ಚಾಲನೆ ಮಾಡಿ ಯುಗಾದಿ ಶುಭ ಕೋರಿದ ರೇಣುಕಾಚಾರ್ಯ…!

ದಾವಣಗೆರೆ: ಯುಗಾದಿ ಹಬ್ಬ ಹಾಗೂ ಹೊಸವರ್ಷದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ರೈತರಿಗೆ ಯುಗಾದಿ ಶುಭ ಕೋರಿದರು.
ಹೊನ್ನಾಳಿ ತಾಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ ರೇಣುಕಾಚಾರ್ಯ ರೈತರೊಂದಿಗೆ ಯುಗಾದಿ ಹಬ್ಬವನ್ನು ಆಚರಿಸಿದರು. ಹೊಸ ವರ್ಷದ ಹಿನ್ನೆಲೆಯಲ್ಲಿ ಮೊದಲ ಬೇಸಾಯ ಮಾಡುವ ಯುಗಾದಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕೋಟೆಮಲ್ಲೂರು ಗ್ರಾಮದ ಹಾಲೇಶಪ್ಪ ಗೌಡರ ನೂತನ ಟ್ಯಾಕ್ಟರ್ ನಲ್ಲಿ ಹೊಲ ಉಳುಮೆ ಮಾಡಿದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಯುವಕರೊಂದಿಗೆ ಲಗೋರಿ, ಚೆಂಡಾಟವನ್ನೂ ಶಾಸಕ ರೇಣುಕಾಚಾರ್ಯ ಆಡಿದರು. ಗ್ರಾಮೀಣ ಭಾಗದ ಕ್ರೀಡೆಯನ್ನು ಅವರೊಂದಿಗೆ ಆಡುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಗ್ರಾಮದ ವೀರಭದ್ರೇಶ್ವರ ಸ್ವಾಮೀಯ ದರ್ಶನ ಪಡೆದು ಗ್ರಾಮಸ್ಥರಿಗೆ ಯುಗಾದಿ ಹಬ್ಭದ ಶುಭಾಶಯವನ್ನು ರೇಣುಕಾಚಾರ್ಯ ಕೋರಿದರು.
ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಯಲ್ಲಿರುವ ಮಂಜುನಾಥ ಸ್ವಾಮಿ, ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರೇಣುಕಾಚಾರ್ಯ, ಯುಗಾದಿ ಹಬ್ಬ ಎಲ್ಲರ ಬಾಳಲ್ಲಿ ಬೆಳಕು ನೀಡಲಿ, ಬೇವು, ಬೆಲ್ಲ ತಿಂದ ಎಲ್ಲರ ಬಾಳಲ್ಲೂ ಕಹಿ ದೂರವಾಗಲಿ ಎಂದು ಆಶಿಸಿದರು.




