ಅಧಿಕಾರ ಇರುತ್ತೆ, ಹೋಗುತ್ತೆ, ಅದು ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ: ರೇಣುಕಾಚಾರ್ಯ

ದಾವಣಗೆರೆ: ಅಧಿಕಾರ ಇರುತ್ತೆ, ಹೋಗುತ್ತೆ. ಇದು ಶಾಶ್ವತ ಅಲ್ಲ. ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ. ಜನಾದೇಶವನ್ನು ನಾನು ಗೌರವಿಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಆಯೋಜಿಸಿದ್ದ ಕುಂಚಟಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಬೂಟಾಟಿಕೆ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಏನು ಕೆಲಸ ಮಾಡಿದ್ದೇನೆ ಎಂಬುದನ್ನು ರಾಜಕೀಯ ಸಭೆಯಲ್ಲಿ ಮಾತನಾಡುತ್ತೇನೆ. ನನ್ನ ಸಾಧನೆ ಮಾತನಾಡುತ್ತದೆ. ಮಾಜಿ ಶಾಸಕರ ಬಗ್ಗೆ ನಾನು ಯಾವತ್ತಿಗೂ ವೈಯಕ್ತಿಕವಾಗಿ ಮಾತನಾಡಿಲ್ಲ. ಅವರು ಹಿರಿಯರು. ಧರ್ಮಸಭೆಯಲ್ಲಿ ಯಾವತ್ತೂ ರಾಜಕಾರಣ ಮಾತನಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.
ಮಾಜಿ ಶಾಸಕ ಶಾಂತನಗೌಡರು ನನ್ನ ಬಗ್ಗೆ ಮಾತನಾಡಿದ್ದಾರೆ. ನಾನು ಶ್ರೀಗಳ ಮೇಲಿನ ಗೌರವದಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸುತ್ತೇನೆ ವಿನಾಃ ಯಾವುದೇ ರಾಜಕೀಯ ಉದ್ದೇಶದಿಂದಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದ ಮೇಲಿನ ಭಯದಿಂದ ಅನುದಾನ ಬಿಡುಗಡೆಗೊಳಿಸಿದ್ದಲ್ಲ. ಪ್ರೀತಿಯಿಂದ ಈ ಕೆಲಸ ಮಾಡಿದ್ದೇನೆ. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರು ಶಕ್ತಿ ಕೊಟ್ಟಿದ್ದಾರೆ. ಆದ್ರೆ ಶಾಂತನಗೌಡರು ಹೇಳುವ ರೀತಿಯಲ್ಲಿ ನನಗೆ ಕುಂಚಿಟಿಗ ಸಮಾಜದ ಭಯ ಇಲ್ಲ. ಪ್ರೀತಿಯನ್ನು ನನಗೆ ಕೊಡುತ್ತಿದ್ದಾರೆ. ಶಾಂತನಗೌಡರಿಗೆ ಮತ್ತೆ ಹೇಳುತ್ತಿದ್ದೇನೆ. ನಾನು ಹೇಳಿರುವ ಈ ಮಾತಿಗೆ ಬದ್ಧನಿದ್ದೇನೆ. ನೀವು ಹಿರಿಯರಿದ್ದೀರಾ. ಮಾತನಾಡುವಾಗ ಎಚ್ಚರದಿಂದ ಹೇಳಿಕೆ ಕೊಡಿ. ನಾನು ಸುತ್ತಿ ಬಳಸಿ ಮಾತನಾಡಲ್ಲ. ನೇರವಾಗಿ ಮಾತನಾಡುತ್ತೇನೆ. ನಿಮ್ಮ ಬಗ್ಗೆ ಯಾವತ್ತಿಗೂ ವೈಯಕ್ತಿಕವಾಗಿ ಮಾತನಾಡಿಲ್ಲ ಎಂದು ಹೇಳಿದರು.
