ಗೆಹರಾಯಿಯಾ ಸಿನಿಮಾ ನಿರ್ದೇಶಿಸಿದಕ್ಕೆ ನನ್ನನ್ನು ಕೆಟ್ಟದಾಗಿ ಬೈಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡ ನಿರ್ದೇಶಕ

ದೀಪಿಕಾ ಪಡುಕೋಣೆ ನಟನೆಯ ಗೆಹರಾಯಿಯಾ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದಷ್ಟು ಮಂದಿ ಸಿನಿಮಾ ಮೆಚ್ಚಿಕೊಂಡ್ರೆ ಸಾಕಷ್ಟು ಮಂದಿ ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇದೀಗ ಸಿನಿಮಾದ ನಿರ್ದೇಶಕ ಶಕುನ್ ಭಾತ್ರಾರನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾಗ ಸ್ವತಃ ನಿರ್ದೇಶಕ ಶಕುನ್ ಭಾತ್ರಾ ಹೇಳಿದ್ದಾರೆ.
ಶಕುನ್ ಭಾತ್ರಾ ನಿರ್ದೇಶನದ ಗೆಹರಾಯಿಯ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ, ನಸಿರುದ್ಧೀನ್ ಶಾ, ರಜತ್ ಕಪೂರ್ ಕಾಣಿಸಿಕೊಂಡಿದ್ದಾರೆ. ವಿವಾಹಿತ ಮಹಿಳೆ ತನ್ನ ಸಂಬಂಧಿಯ ಬಾಯ್ಫ್ರೆಂಡ್ ಜೊತೆ ಅನೈತಿಕ ಸಂಬಂಧವನ್ನ ಹೊಂದುವ ಕಥೆಯನ್ನ ಗೆಹರಾಯಿಯಾ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ನೋಡಿದವ್ರು ತಮಗೆ ಇಮೇಲ್ ಮಾಡಿ ಕೆಟ್ಟದಾಗಿ ಬೈದಿರೊದಾಗಿ ಶಕುನ್ ಭಾತ್ರಾ ಹೇಳಿದ್ದಾರೆ.
ಇಮೇಲ್ನ ಸಜ್ಬೆಕ್ಟ್ನಲ್ಲಿಯೇ ಕೆಟ್ಟ ಹಿಂದಿ ಶಬ್ದಗಳನ್ನ ಉಪಯೋಗಿಸಿ ಬೈಯಲಾಗಿತ್ತು. ಸಂದೇಶದಲ್ಲಿ ಇನ್ನೂ ಕೆಟ್ಟದಾಗಿ ಬೈದಿದ್ದರು. ಸಿನಿಮಾ ಮಾಡಲು ಬರದಿದ್ದರೆ ಬೇರೆ ಏನಾದರೂ ಕೀಳುವ ಕೆಲಸ ಮಾಡು ಎಂದು ಸಿನಿಮಾ ನೋಡಿದ ವ್ಯಕ್ತಿಯೊಬ್ಬರು ಬರೆದಿದ್ದರು. ಇಂಥಹ ಹಲವು ಇಮೇಲ್ ಹಾಗೂ ವಾಟ್ಸ್ಆಪ್ ಸಂದೇಶಗಳು ಬಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ.
ಇಂಥಹಾ ಸಂದೇಶಗಳಿಂದ ನನಗೆ ಯಾವುದೇ ಬೇಸರ ಇಲ್ಲ. ಸಿನಿಮಾ ನೋಡಿದ ಕೆಲವರು ಚಿತ್ರದ ಕುರಿತಾಗಿ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ಬ್ರಿಸ್ಬೇನ್ನ ಮನಶಾಸ್ತ್ರಜ್ಞರೊಬ್ಬರು ಸಂದೇಶ ಕಳುಹಿಸಿ, ನನ್ನ ಸಿನಿಮಾದಲ್ಲಿನ ಪಾತ್ರಗಳ ಮನಸ್ಥಿತಿ, ಮನೋ ಆರೋಗ್ಯದ ಬಗ್ಗೆ ಚರ್ಚೆ ಮಾಡಿದರು. ವ್ಯಕ್ತಿಯ ಮನೋ ವ್ಯಾಕುಲತೆಗಳನ್ನು, ವಾಂಛೆಗಳನ್ನು ಚಿತ್ರದಲ್ಲಿ ಚೆನ್ನಾಗಿ ಬಿಂಬಿಸಲಾಗಿದೆ ಎಂದು ಹೊಗಳಿದ್ದಾರೆ ಎಂದು ಶಕುನ್ ಭಾತ್ರ ಹೇಳಿದ್ದಾರೆ. ಇಂಥಹಾ ಸಂದೇಶಗಳಿಂದ ನಾನು ಇನ್ನಷ್ಟು ಕಲಿಯುತ್ತೇನೆ ಎಂದಿದ್ದಾರೆ.
ಗೆಹರಾಯಿಯನ್ ಸಿನಿಮಾ ವೀಕ್ಷಿಸಲು ಆರಂಭಿಸಿದ 20 ನಿಮಿಷಯದಲ್ಲಿಯೇ ಚಿತ್ರ ವೀಕ್ಷಿಸುವುದನ್ನ ನಿಲ್ಲಿಸಿದ್ದಾಗಿ ಈ ಹಿಂದೆ ಬೆಂಗಳೂರಿನ ಮಾಜಿ ಕಮಿಷನರ್ ಭಾಸ್ಕರ್ ರಾವ್ ಟ್ವೀಟ್ ಮೂಲಕ ಹೇಳಿದ್ದರು. ಗೆಹರಾಯಿಯಾ ಚಿತ್ರವನ್ನು ವೀಕ್ಷಿಸಲು ಪಾರಂಭಿಸಿದೆವು. 20 ನಿಮಿಷಗಳ ನಂತರ ನಾನು ಚಿತ್ರವನ್ನು ವೀಕ್ಷಿಸಲು ನಿಲ್ಲಿಸಿದೆ. ಜೀವನದ ಮೌಲ್ಯಗಳಿಗೆ ಚಿತ್ರ ಅವಮಾನಿಸಿದೆ ಎಂದು ನನಗೆ ಅನಿಸಿತು. ನಾನು ದೀಪಿಕಾ ಪಡುಕೋಣೆ ಅವರ ಅಭಿಮಾನಿ. ಅವರು ನಮ್ಮ ಬೆಂಗಳೂರಿನ ಹುಡುಗಿ, ಸಾಧಿಕಿ ಹಾಗೂ ಧೈರ್ಯಶಾಲಿ ಹೆಣ್ಣು ಮಗಳು. ಲಕ್ಷಾಂತರ ಯುವತಿಯರು ದೀಪಿಕಾ ಪಡುಕೋಣೆ ಅವರನ್ನು ಆರಾಧಿಸುತ್ತಾರೆ, ಅನುಸರಿಸುತ್ತಾರೆ. ಆದರೆ ಸಿನಿಮಾದಲ್ಲಿ ವಿವಾಹೇತರ ಸಂಬಂಧ ಮತ್ತು ಮನೆಯ ನಾಶದ ಕಥಾವಸ್ತು ಇದೆ. ಇದು ಸರಿ ಎಂದು ಕೆಲವರು ಭಾವಿಸಬಹುದು. ಆದರೆ ಚಿತ್ರದಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ನಾನು ಹಳೆಯ ಕಾಲದವನಾ?” ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದರು.



