ಆಸ್ತಿ ವಿಚಾರಕ್ಕೆ ತಂದೆಯನ್ನೇ ಶೂಟ್ ಮಾಡಿದ ಮಗ!

ಮೈಸೂರು ; ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿ ತಂದೆಯನ್ನು ಮಗನೇ ಶೂಟ್ಔಟ್ ಮಾಡಿರುವ ಘಟನೆ ಸೋಮವಾರ ಮೈಸೂರಿನಲ್ಲಿ ನಡೆದಿದೆ. ನಗರದ ವಿಜಯನಗರ ಮೂರನೇ ಹಂತದಲ್ಲಿ ಈ ಘಟನೆ ನಡೆದಿದ್ದು, ರೇಣುಕಾ ಕಾಲೇಜಿನ ಆಸ್ತಿ ವಿಚಾರವಾಗಿ ಕಳೆದ ಒಂದು ತಿಂಗಳಿನಿಂದ ಅಪ್ಪ, ಮಗ ಮತ್ತು ಕುಟುಂಬಸ್ಥರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮನೆಗೆ ಬಂದಿರುವ ಮಗ ತಂದೆ ಶಿವಕುಮಾರ್ ಜೊತೆಗೆ ಆಸ್ತಿ ವಿಚಾರವಾಗಿ ಮತ್ತೆ ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿದೆ. ಈ ವೇಳೆ ಮಗನೇ ಶಿವಕುಮಾರ್ ಮೇಲೆ ಏರ್ ಗನ್ ನಿಂದ ಶೂಟ್ ಮಾಡಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಶಿವಕುಮಾರ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಶೂಟ್ ಔಟ್ ಮಾಡಿರುವ ಪುತ್ರ ಹಾಗೂ ಆತನ ಸ್ನೇಹಿತರು ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆ ಸಂಭಂದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
