ಹಿಜಾಬ್ ಪ್ರಕರಣ: ಹೈಕೋರ್ಟ್ ವಿಸ್ತೃತ ಪೀಠದಲ್ಲಿ ಇಂದು ವಿಚಾರಣೆ ಮುಂದುವರಿಕೆ

ಬೆಂಗಳೂರು: ಹೈಕೋರ್ಟ್ ವಿಸ್ತೃತ ಪೀಠದಲ್ಲಿ ಹಿಜಾಬ್-ಕೇಸರಿ ಸಂಘರ್ಷದ ವಿಚಾರಣೆ ಸೋಮವಾರ ಮುಂದುವರಿಯಲಿದೆ. ಅಂತಿಮ ತೀರ್ಪಿಗಾಗಿ ಸಂಬಂಧಿಸಿದ ನ್ಯಾಯಾವಾದಿಗಳು ವಾದ ಮಂಡಿಸುತ್ತಿದ್ದಾರೆ. ಈ ನಡುವೆ ಸೋಮವಾರವೂ ಹೈಕೋರ್ಟ್ ವಾದ ಮಂಡನೆ ಪೂರ್ಣಗೊಳ್ಳುವುದು ಅನುಮಾನವಿದ್ದು, ಮಂಗಳವಾರವೂ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.
ಸೋಮವಾರ ಮಧ್ಯಾಹ್ನ ಎರಡೂವರೆ ಗಂಟೆಗೆ ಹೈಕೋರ್ಟ್ ವಿಸ್ತೃತ ಪೀಠ ಹಿಜಾಬ್ ಕುರಿತು ಮುಂದುವರಿದ ವಿಚಾರಣೆ ನಡೆಸಲಿದೆ. ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ಈವರೆಗೆ ಆರು ರಿಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ಕಾರವೂ ಸೇರಿದಂತೆ ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆಯೂ ನಡೆಯಲಿದೆ.
ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್ ಸೋಮವಾರ ತಮ್ಮ ವಾದ ಮುಂದುವರಿಸಲಿದ್ದಾರೆ. ಹಿಂದೂ ಮತ್ತು ಇಸ್ಲಾಂ ಧಾರ್ಮಿಕ ನಂಬಿಕೆ, ಆಚರಣೆ ಕುರಿತು ಜಿಜ್ಞಾಸೆ ನಡೆಯುವ ಸಾಧ್ಯತೆ ಇದೆ. ಕೋರ್ಟ್ ಸರ್ಕಾರದಿಂದ ಸ್ಪಷ್ಟನೆ ಪಡೆಯುವ ನಿರೀಕ್ಷೆ ಇದೆ.
ರಾಜ್ಯವ್ಯಾಪಿ ಕುತೂಹಲ ಕೆರಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ಚಿತ್ತ ಈಗ ಹೈಕೋರ್ಟ್ ನತ್ತ ನೆಟ್ಟಿದೆ.
