ರಾಷ್ಟ್ರಧ್ವಜ ಕಂಬದ ಮೇಲೆ ಬೇರೆ ಧ್ವಜ ಹಾರಿಸುವಂತಿಲ್ಲ: ಡಿಕೆಶಿ ಸ್ಪಷ್ಟನೆ

ಬೆಂಗಳೂರು: ರಾಷ್ಟ್ರಧ್ವಜ ಕಂಬದ ಮೇಲೆ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರಧ್ವಜಕ್ಕೆ ಅದರದೇ ಆದ ಕಾಯ್ದೆ ಇದೆ. ರಾಷ್ಟ್ರ ಧ್ವಜದ ಕಂಬದ ಮೇಲೆ ಎಲ್ಲ ಧ್ವಜಗಳನ್ನು ಹಾರಿಸಲು ಸಾಧ್ಯವಿಲ್ಲ ಅದು ಸರ್ಕಾರದ ಆಸ್ತಿ ಎಂದರು.
ಶಿವಮೊಗ್ಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಯುವಕನೊಬ್ಬ ರಾಷ್ಟ್ರಧ್ವಜ ಕಂಬದ ಮೇಲೆ, ಕೇಸರಿ ಧ್ವಜ ಹಾರಿಸಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾ್, ಸರ್ಕಾರದ ಆಸ್ತಿಯಲ್ಲಿ ಈ ರೀತಿ ಬೇರೆ ಧ್ವಜ ಹಾರಿಸಿರುವುದನ್ನು ನೋಡಿಕೊಂಡು ಸರ್ಕಾರ ಏನು ಮಾಡುತ್ತಿದೆ? ಈ ರೀತಿ ಆಗಿರುವುದು ತಪ್ಪು ಎಂದು ಸಚಿವ ಅಶೋಕ್ ಅವರು ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದರು.
ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ವಿರೋಧ ಪಕ್ಷದ ಅಧ್ಯಕ್ಷ. ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಪಿತೂರಿ ಯಾರು ಎಲ್ಲಿಂದ ಮಾಡುತ್ತಿದ್ದಾರೆ, ಮಂಡ್ಯ, ಶಿವಮೊಗ್ಗ, ಬೇರೆ ಕಡೆಗಳಲ್ಲಿ ಪಿತೂರಿ ಮಾಡುತ್ತಿರುವವರು ಯಾರು? ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟವನ್ನು ಅವರ ಮನೆಯಿಂದ ತಂದಿದ್ದರಾ? ಅವರೇನು ಕಾಸು ಕೊಟ್ಟು ಖರೀದಿಸಿದ್ದರಾ? ಅವುಗಳನ್ನು ಹೇಗೆ ಹಂಚುತ್ತಿದ್ದರು ಎಂಬುದನ್ನು ಮಾಧ್ಯಮಗಳಲ್ಲೇ ನೋಡಿದ್ದೇವೆ. ರಾತ್ರೋರಾತ್ರಿ ಅಷ್ಟೋಂದು ಪೇಟಗಳು ಎಲ್ಲಿಂದ ಬಂದಿವೆ? ಎಂದು ಪ್ರಶ್ನಿಸಿದರು.
ರಾಷ್ಟ್ರಧ್ವಜ, ಸಂವಿಧಾನ ನಮ್ಮ ಧರ್ಮ
ಕೇಸರಿ ಹಾಗೂ ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, ‘ರಾಷ್ಟ್ರ ಧ್ವಜ ಹಾಗೂ ಸಂವಿಧಾನ ನಮ್ಮ ಧರ್ಮ. ಇದೇ ನಮ್ಮ ನಿಲುವು. ನಾನು ಒಬ್ಬ ಹಿಂದೂ ಆಗಿ ಎಲ್ಲ ಧರ್ಮದವರಿಗೆ ಗೌರವ ನೀಡಬೇಕು. ನಾನು ಹುಟ್ಟುವಾಗ ಅರ್ಜಿ ಹಾಕಿಕೊಂಡು ಹುಟ್ಟಿರಲಿಲ್ಲ. ಅವರವರು ಅವರ ಧರ್ಮಕ್ಕೆ ಗೌರವ ಕೊಡಬೇಕು ಎಂದರು.
