ಹಿಜಾಬ್, ಕೇಸರಿ ಸಂಘರ್ಷದ ನಡುವೆ ಕಾಲೇಜಿಗೆ ಕಾಲಿಟ್ಟ ನೀಲಿ ರುಮಾಲು!

ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ದೇಶ-ವಿದೇಶಗಳ ಗಮನ ಸೆಳೆದಿದೆ. ಮೊದಲು ಇದು ಕರಾವಳಿ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈ ಕಿಡಿ, ಇದೀಗ ರಾಜ್ಯದೆಲ್ಲೆಡೆ ಹಬ್ಬಿ ರಾಜಕೀಯ ಸ್ವರೂಪ ಪಡೆದಿದೆ. ಈ ನಡುವೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಮಂಗಳವಾರ ವಿಚಾರಣೆ ನಡೆಯಲಿದೆ. ಈ ನಡುವೆ ಸರ್ಕಾರದ ಸುತ್ತೋಲೆಯನ್ನು ಎಲ್ಲರೂ ಪರಿಪಾಲಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದೆಲ್ಲದರ ನಡುವೆ ಬಹುಜನ ವಿದ್ಯಾರ್ಥಿ ಪರಿಷತ್(ಬಿವಿಪಿ) ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಸೋಮವಾರ ಸಮಾನತೆ ಸಾರುವ ನೀಲಿ ಶಾಲು ಧರಿಸಿ ಕುಂದಾಪುರ ಕಾಲೇಜಿಗೆ ಬಂದರು. ಈ ವೇಳೆ, ಕೇಸರಿಧಾರಿಗಳಾದ ಎಬಿವಿಪಿ ಮತ್ತು ಬಿವಿಪಿ ಸಂಘಟನೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಮಧ್ಯೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಹಿಜಾಬ್ ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೆಸರಿ ಶಾಲು ಧರಿಸಿ ಕಾಲೇಜಿಗೆ ಬಂದು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಲೇಜಿನ ಆಡಳಿತ ಮಂಡಳಿ ಕೇಸರಿ ಶಾಲು ಧರಿಸಿ ಬಂದವರನ್ನು ಕಾಲೇಜಿನ ಪ್ರವೇಶ ನೀಡಲು ನಿರಾಕರಿಸಿ, ಹೊರಗೆ ಕಳುಹಿಸಿತು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಇಕ್ಕಟ್ಟಿಗೆ ಸಿಲುಕಿದ ಆಡಳಿತ ಮಂಡಳಿ ಕೇಸರಿ ಶಾಲು ಧರಿಸಿ ಬರಲು ಒಪ್ಪಿಗೆ ನೀಡಿತು.
