ವಿವಾಹಿತೆ ಜೊತೆ ಅಕ್ರಮ ಸಂಬಂಧ ಯುವಕನ ತಾಯಿ-ತಂದೆ ಮೇಲೆ ಹಲ್ಲೆ

ಮೈಸೂರು: ವಿವಾಹಿತ ಮಹಿಳೆಯೊಂದಿಗೆ ಯುವಕನ ಅಕ್ರಮ ಸಂಬಂಧ ಹಿನ್ನೆಲೆ ಮಹಿಳೆ ಸಂಬಂದಿಕರು ಯುವಕನ ಕುಟುಂಬವನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಚ್. ಡಿ ಕೋಟೆ ತಾಲೂಕಿನ ಜೊಂಪನಹಳ್ಳಿ ಗ್ರಾಮದ ಶಿವಪ್ಪ (45), ಜ್ಯೋತಿ (40) ಹಾಗೂ ಶರತ್ (20) ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಹಿತ್ ಹಾಗೂ ಪರಶಿವಮೂರ್ತಿ ಎಂಬುವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಜೊಂಪನಹಳ್ಳಿಯ ವಿವಾಹಿತ ಮಹಿಳೆಯ ಜೊತೆ ಶರತ್ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗ್ತಿದೆ.
ಈ ವಿಚಾರದಲ್ಲಿ ಮಹಿಳೆ ಸಂಭಂದಿಕರಾದ ಲೋಹಿತ್ ಹಾಗೂ ಪರಶಿವಮೂರ್ತಿ ಎಂಬುವರು ಒಂದೆರಡು ಬಾರಿ ಗಲಾಟೆ ಮಾಡಿದ್ದರು. ಪಂಚಾಯಿತಿ ನಡೆಸಿ ಮಹಿಳೆ ಹಾಗೂ ಶರತ್ ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಇಬ್ಬರ ನಡುವೆ ಅಕ್ರಮ ಸಂಬಂಧ ಮುಂದುವರೆದಿತ್ತು.
ಮಹಿಳೆ ಸಹವಾಸಕ್ಕೆ ಬರದಂತೆ ಶರತ್ಗೆ ಮಹಿಳೆಯ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರು. ಮತ್ತೆ ಈ ವಿಚಾರವಾಗಿ ಭಾನುವಾರ ನ್ಯಾಯಪಂಚಾಯ್ತಿ ಸಹ ನಡೆಸಲಾಗಿತ್ತು. ಆದರೆ, ಕಾರಣಾಂತರದಿಂದ ನ್ಯಾಯಪಂಚಾಯ್ತಿ ಮುಂದೂಡಲಾಗಿತ್ತು. ಪರಿಚಯಸ್ಥರೊಬ್ಬರು ಸಾವನ್ನಪ್ಪಿದ ಕಾರಣ ಅಂತಿಮ ದರ್ಶನಕ್ಕೆ ಶರತ್, ತಂದೆ ಶಿವಪ್ಪ ಹಾಗೂ ತಾಯಿ ಜ್ಯೋತಿ ಒಂದೇ ಬೈಕ್ನಲ್ಲಿ ತೆರಳುತ್ತಿದ್ದರು. ಈ ವಿಷಯ ತಿಳಿದ ಲೋಹಿತ್ ಹಾಗೂ ಪರಶಿವಮೂರ್ತಿ, ನಡು ರಸ್ತೆಯಲ್ಲೇ ಯುವಕ ಮತ್ತು ಆತನ ತಂದೆ ಹಾಗೂ ತಾಯಿಯನ್ನು ಅಡ್ಡ ಹಾಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮೂವರು ರಸ್ತೆಯಲ್ಲಿ ಕೂಗಾಡುತ್ತಿದ್ದಾಗ ಗ್ರಾಮಸ್ಥರು ಬರುತ್ತಿದ್ದಂತೆ, ಲೋಹಿತ್ ಹಾಗೂ ಪರಶಿವಮೂರ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಾಯಾಳುಗಳನ್ನು ಹೆಚ್. ಡಿ ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶರತ್ ಹಾಗೂ ಶಿವಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಶರತತ್ನ ತಾಯಿ ಜ್ಯೋತಿ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಘಟನೆ ಸಂಭಂದ ಹೆಚ್. ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



