ಕಾರ್ಮಿಕರ ಪಿಂಚಣಿ ಏರಿಕೆಗೆ ಅಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಕಾರ್ಮಿಕರ ಪಿಂಚಣಿಯನ್ನು ಒಂದು ಸಾವಿರದಿಂದ ಐದು ಸಾವಿರ ರೂಪಾಯಿಗೆ ಏರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಹುಬ್ಬಳ್ಳಿಯಲ್ಲಿ ವಿವಿಧ ಕಂಪನಿಯ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕಚೇರಿ ಮುಭಾಗ, ಜಿಲ್ಲಾ ಮಜ್ದೂರು ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ ಕಾರ್ಮಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ನೀಡುವ ಒಂದು ಸಾವಿರ ಪಿಂಚಣಿ ಹಣ ಯಾವುದಕ್ಕೂ ಸಾಲೂವುದಿಲ್ಲ. ಇಂದಿನ ದಿನಮಾನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂತಹದರಲ್ಲಿ ಕಾರ್ಮಿಕರಿಗೆ ಒಂದು ಸಾವಿರ ಪಿಂಚಣಿ ನೀಡುವುದು ಸರಿಯಲ್ಲ. ಕೂಡಲೇ ಕಾರ್ಮಿಕ ಇಲಾಖೆ ಹಾಗೂ ಸರ್ಕಾರಗಳು ಇದರ ಬಗ್ಗೆ ಪರಿಶೀಲನೆ ನಡೆಸಿ ಪಿಂಚಣಿಯನ್ನ ಒಂದು ಸಾವಿರದಿಂದ ಐದು ಸಾವಿರ ರೂಪಾಯಿಗೆ ಏರಿಸಬೇಕು ಎಂದು ಅಗ್ರಹಿಸಿದರು.
ನಿವೃತ್ತಿ ಹೊಂದಿದವರ ವೇತನದಲ್ಲಿ ಕನಿಷ್ಠ 50 ರಷ್ಟು ಪಿಂಚಣಿ ಸಿಗಬೇಕು. ಜೊತೆಗೆ ಮುಂದಿನ ಕಾರ್ಮಿಕರಿಗೆ ಆಯುಷ್ಮಾನ್ ಆರೋಗ್ಯ ಯೋಜನೆ ಅಡಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲಾ ಮಜ್ದೂರು ಸಂಘ, ಬರೋಕಾ ಸಂಘ, ದಾಂಡೇಲಿ ಪೇಪರ್ ಮಿಲ್ ಸಂಘದ ಕಾರ್ಮಿಕರು ಭಾಗಿಯಾಗಿ ಭವಿಷ್ಯ ನಿಧಿ ಇಲಾಖೆಯ ಪ್ರಾದೇಶಿಕ ಆಯುಕ್ತರ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದರು.




