ಜಿಲ್ಲಾ ಸುದ್ದಿ
ಕೊಲ್ಲೂರು ಯಾತ್ರಾರ್ಥಿಗಳಿದ್ದ ಬಸ್ ಪಲ್ಟಿ : ಹಲವರಿಗೆ ಗಾಯ

ಉಡುಪಿ : ಕೊಲ್ಲೂರಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಹಲವರು ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ. ಇಲ್ಲಿಗೆ ಸಮೀಪದ ದಳಿ ತಿರುವಿನ ಬಳಿ ಈ ಅವಘಡ ಸಂಭವಿಸಿದೆ.
ಅಪಘಾತದಿಂದ 22 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. 22 ಮಂದಿಯ ಪೈಕಿ ಸಂಕ್ರಪ್ಪ (50), ರೂಪಾ (35), ಶ್ಯಾಮಲಮ್ಮ (42), ರತ್ನಮ್ಮ (52), ವೆಂಕಟರಮಣ (45), ಚಂದ್ರಕಲಾ (43) ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಸ್ಥಳಾಂತರಿಸಲಾಗಿದೆ.
ಗಾಯಾಳುಗಳು ಕೋಲಾರ ಜಿಲ್ಲೆಯ ಮುಳುಬಾಗಿಲು ಮೂಲದವರೆಂದು ತಿಳಿದು ಬಂದಿದೆ. ಕೊಲ್ಲೂರು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಪಲ್ಟಿಯಾದ ಬಸ್ ನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ.




