
ಕಾಂಗ್ರೆಸ್ ಪಕ್ಷ ಕರೆದ ಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ಬೆಂಬಲ ಸೂಚಿಸಿದ್ದು, ವಾಣಿಜ್ಯ ಮಂಡಳಿಯ ಈ ನಿರ್ಧಾರದ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 77 ವರ್ಷಗಳ ಇತಿಹಾಸವಿದೆ. ಕನ್ನಡ ಚಿತ್ರರಂಗ ಯಾವುದೇ ಒಂದು ಪಕ್ಷಕ್ಕೆ ಸಿಮಿತವಾಗಿಲ್ಲ. ಇದುವರೆಗೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಹೀಗಿರುವಾಗ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ ನಿರ್ಧಾರದ ಬಗ್ಗೆ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಿರ್ದೇಶಕಿ ರೂಪ ಅಯ್ಯರ್ ವಿರೋಧ ವ್ಯಕ್ತಪಡಿಸಿದ್ದು, ಒಂದು ಪಕ್ಷವನ್ನು ಓಲೈಸುವ ಕಾರಣಕ್ಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ರಾಜಕೀಯಕ್ಕೆ ಕಾಲಿಡಬಾರದು. ವಾಣಿಜ್ಯ ಮಂಡಳಿಯ ಅನೇಕ ಸದಸ್ಯರು ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಫಿಲ್ಮ್ ಚೇಂಬರ್ ಯಾವುದೇ ಪದಾಧಿಕಾರಿಗಳಿಗೂ ಇಷ್ಟ ಆಗಿಲ್ಲ.

ಒಳಗಡೆ ಇರುವ ಯಾರಿಗೊ ಟಿಕೆಟ್ ಸಿಗಬೇಕು ಅನ್ನುವ ಕಾರಣಕ್ಕಾಗಿ, ಇನ್ನೊಂದು ವೈಯಕ್ತಿಕ ನಿಲುವನ್ನು ಇಟ್ಟುಕೊಂಡು ವಾಣಿಜ್ಯ ಮಂಡಳಿಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ನಾನೇ ಯಾವುದೋ ಇನ್ನೊಂದು ಪಕ್ಷವನ್ನು ಇಷ್ಟ ಪಡುತ್ತೇನೆ ಎಂದ ಕಾರಣಕ್ಕೆ ನಾನು ಫಿಲ್ಮ್ ಚೇಂಬರ್ ವೇದಿಕೆಯನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಅವರೇ ಹೇಳಿದ್ದಾರೆ. ಈ ಪಾದಾಯಾತ್ರೆಯ ರುವಾರಿಗಳು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಎಂದು. ಹಾಗಿದ್ದ ಮೇಲೆ ಇದು ಕರ್ನಾಟಕದ ಹೋರಾಟ ಹೇಗೆ ಆಗುತ್ತೆ? ಇದೊಂದು ಪಕ್ಷದ ಹೊರಾಟ ಆಗುತ್ತೆ ಎಂದಿದ್ದಾರೆ.

ಫಿಲ್ಮ್ ಚೇಂಬರ್ ನೂರಾರು ಹೋರಾಟ ಮಾಡಬಹುದು. ಮೂರು ವರ್ಷದಿಂದ ಸಬ್ಸಿಡಿ ಕೊಡುತ್ತಿಲ್ಲ. ಎಷ್ಟೋ ಜನ ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡರು. ಬಡ್ಡಿ ಮೇಲೆ ಬಡ್ಡಿ ಬೆಳೆದಿದೆ ಅಂತ ಖಾಯಿಲೆಗೀಡಾಗಿದ್ದಾರೆ. ಕಿಡ್ನಿ ಕಳೆದುಕೊಂಡಿದ್ದಾರೆ. ಹಾರ್ಟ್ ಪ್ರಾಬ್ಲಮ್ ಇದೆ. ಅದಕ್ಕೆ ಯಾಕೆ ಹೋರಾಟ ಮಾಡುತ್ತಿಲ್ಲ. ಚಿತ್ರರಂಗದೊಳಗೆ ನೂರಾರು ಸಮಸ್ಯೆಗಳು ಇದ್ದಾಗ ಅದಕ್ಕೆ ಯಾಕೆ ಪಾದಯಾತ್ರೆ ಮಾಡುತ್ತಿಲ್ಲ. ಒಂದು ಪಕ್ಷ ಕರೆ ನೀಡಿದಾಗಲೇ ಯಾಕೆ ಪಾದಯಾತ್ರೆ ಮಾಡಬೇಕು. ಇನ್ನೊಂದು ತಿಂಗಳು ಬಿಟ್ಟು ಮಾಡಬಹುದಿತ್ತು ಎಂದು ನಿರ್ದೇಶಕಿ ರೂಪ ಅಯ್ಯರ್ ಕಿಡಿ ಕಾರಿದ್ದಾರೆ.
