
ಬೆಂಗಳೂರು: ಕೊವಿಡ್ ಸೋಂಕಿನ ನಡುವೆಯೂ ಪಾದಯಾತ್ರೆ ಕೈಗೊಳ್ಳುವುದರ ಮೂಲಕ, ಕಾಂಗ್ರೆಸ್ ನಾಯಕರು, ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಚಿವರು, ಕೊರೋನಾ ನಿಯಂತ್ರಣ ಕಾಯಿದೆ ಉಲ್ಲಂಘಿಸಿದವರ ವಿರುಧ್ದ, ರಾಮನಗರ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಉದ್ದೇಶ ನೀರಿನ ಮೇಲೆ ರಾಜಕೀಯ ಮಾಡುವುದು, ಆದರೆ ನಮ್ಮ ಆತಂಕ ಇರುವುದು ಸಾರ್ವಜನಿಕರ ಆರೋಗ್ಯ ಕಾಪಾಡುವುದಾಗಿದೆ, ಎಂದರು.
ಕೊರೋನಾ ಸೋಂಕು ಉಲ್ಬಣಗೊಂಡು ಜನತೆ ಸಂಕಷ್ಟಕ್ಕೀಡಾದರೆ, ಕಾಂಗ್ರೆಸ್ ನಾಯಕರು ಹೊಣೆ ಹೊರಬೇಕಾದೀತು ಎಂದು ಎಚ್ಚರಿಸಿದ ಸಚಿವರು, ಕಾಂಗ್ರೆಸ್ ನಡೆಯಿಂದ ನಾಡಿನ ಜನತೆ ಅಸಮಾಧಾನ ಗೊಂಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರ ನಡವಳಿಕೆ ಅತ್ಯಂತ ಹೊಣೆಗೇಡಿತನದ್ದು ಹೇಳಿದ ಅವರು, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಯನ್ನು ಜಿಲ್ಲಾಡಳಿತ ನಿಭಾಯಿಸುತ್ತಿದೆ . ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ ಅವರು ನ್ಯಾಯಾಲಯದಲ್ಲಿ ಉತ್ತರಿಸಲಿ, ಎಂದರು.
ನೀರಿನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ, ಆದರೆ ಜನತೆ ಬುದ್ದಿವಂತರು, ಇವರ ನಾಟಕವನ್ನು ಅರ್ಥ ಮಾಡಿಕೊಂಡಿದ್ದಾರೆ”, ಮೇಕೆದಾಟು ಯೋಜನೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ವಹಿಸಿದ್ದಾರೆ, ಈಗ ಮುಂದಿನ ಚುನಾವಣೆ ದೃಷ್ಟಿಯಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಎಂದು ಹೇಳಿದರು.
ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ನಮ್ಮ ಸರಕಾರ ಬದ್ದ ಯಾವುದೇ ಸಂಶಯ ಬೇಡ, ಎಂದ ಸಚಿವರು, ವಿವಾದ ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಮುಂದಿದೆ. ಕಾಂಗ್ರೆಸ್ ನಾಯಕರು ಅಧಿಕಾರ ದಲ್ಲಿದ್ದಾಗ, ಐದು ವರ್ಷದಲ್ಲಿ ಕೇವಲ ಡಿ ಪಿ ಆರ್ ಸಲ್ಲಿಸಿದ್ದು ಬಿಟ್ಟರೆ, ಬೇರೆ ಏನೂ ಮಾಡಲಿಲ್ಲ ಎಂದು, ಟೀಕಿಸಿದರು.
ಕೋರೋನಾ ನಿಬಂಧನೆಗಳನ್ನು ಪಾಲಿಸುವುದಿಲ್ಲ ಬೇಕಾದರೆ ಜೈಲಿಗೆ ಹಾಕಿ ಎಂದು ಸವಾಲು ಎಸೆದಿದ್ದಾರೆ ಇದು ಅವರ ಉದ್ದಟತನ ತೋರಿಸುತ್ತದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
