
ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಆಯ್ಕೆಯಾಗಿರುವ ವಿಧಾನಪರಿಷತ್ ನೂತನ ಸದಸ್ಯರ ಪ್ರಮಾಣವಚನ ಸಮಾರಂಭ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಸರ್ಕಾರವೇ ಜಾರಿಗೊಳಿಸಿರುವ ಕೋವಿಡ್ ಕಠಿಣ ನಿಯಮಗಳ ಸ್ಪಷ್ಟ ಉಲ್ಲಂಘನೆ ಇದಕ್ಕೆ ಕಾರಣ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭಕ್ಕೆ ನೂತನ ಶಾಸಕರ ಭಾರಿ ದಂಡೇ ಆಗಮಿಸಿದ್ದರಿಂದ ಸರ್ಕಾರವೇ ಕೋವಿಡ್ ನಿಯಮಗಳ ಉಲ್ಲಂಘನೆಗೆ ಆಸ್ಪದ ನೀಡಿದೆ ಎಂಬ ಟೀಕೆ ಹಾಗೂ ಆಕ್ರೋಶಕ್ಕೆ ಇದು ಗುರಿಯಾಯಿತು.
ಪಾದಯಾತ್ರೆ ನಡದೇ ನಡೆಯುತ್ತದೆ
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಮಾಣವಚನ ದಂತಹ ಸಮಾರಂಭಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರ ಮೇಕೆದಾಟು ಪಾದಯಾತ್ರೆಗೆ ತಡೆಯೊಡ್ಡಲು ಮುಂದಾಗಿದೆ. ಸರ್ಕಾರ ಏನೇ ಮಾಡಿದರೂ ಪಾದಯಾತ್ರೆ ನಡದೇ ನಡೆಯುತ್ತದೆ ಎಂದರು.
ಪ್ರಮಾಣವಚನ ಸಮಾರಂಭವನ್ನು ವಿಧಾನಸಭೆ ಅಥವಾ ವಿಧಾನಪರಿಷತ್ತಿನಲ್ಲಿ ಮಾಡಬಹುದಿತ್ತು. ಆಥವಾ ವರ್ಚ್ಯುವೆಲ್ ಆಗಿ ಕಾರ್ಯಕ್ರಮ ನಡೆಸಬಹುದಿತ್ತು. ಕಾಂಗ್ರೆಸ್ ಪಾದಯಾತ್ರೆಗೆ ಅಡ್ಡಿಪಡಿಸಲು ಹೊರಟಿರುವ ಸರ್ಕಾರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದವರ ಮೇಲೆಲ್ಲಾ ಕೇಸ್ ಹಾಕಬಹುದಿತ್ತಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೊಡ್ಡ ಬೆದರಿಕೆಗೆ ಹೆದರಲ್ಲ
ಈ ನಡುವೆ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡಿದರೆ ಕಾನೂನು ರಿತ್ಯ ಕ್ರಮ ಜರುಗಿಸಲಾಗುತ್ತದೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಯಿಂದ ಕೆರಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ಅವರು ಯಾರನ್ನು ಬೇಕಾದರೂ ಬಂಧಿಸಲಿ, ಜೈಲಿಗೆ ಹಾಕಲಿ ಅವರ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಹೆದರಲ್ಲ. ನೀರಿಗಾಗಿ, ಜನರಿಗಾಗಿ ನಾವು ನಡೆಯುತ್ತಿದ್ದೇವೆ ಎಂದರು.
ಆರೋಗ್ಯ ಕೆಡಿಸಿಕೊಳ್ಳಬಾರದು
ಈ ನಡುವೆ ಕಾಂಗ್ರೆಸ್ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೂಡ ಆರೋಗ್ಯ ವಾಗಿರಬೇಕು. ಅವರು ಆರೋಗ್ಯ ಕೆಡಿಸಿಕೊಳ್ಳಬಾರದು. ಹೀಗಾಗಿ ಪಾದಯಾತ್ರೆ ಮಾಡಬೇಡಿ ಎಂದು ಹೇಳುತ್ತೇವೆ. ಮಾಡೇ ಮಾಡುತ್ತೇವೆ ಎಂದರೆ ಅವರಿಷ್ಟ ಎಂದಿದ್ದಾರೆ.
