ಕಲಬುರ್ಗಿಜಿಲ್ಲಾ ಸುದ್ದಿ
ಠಾಣೆಗೆ ಕರೆತಂದು ವ್ಯಕ್ತಿ ಮೇಲೆ ಹಲ್ಲೆ: ನಾಲ್ವರು ಪೊಲೀಸ್ ಕಾನ್ಸ್ಸ್ಟೇಬಲ್ಗಳ ಅಮಾನತ್ತು

ಕಲಬುರಗಿ: ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಲ್ಲೆ ಮಾಡಿದ ಹಿನ್ನೆಲೆ ಚೌಕ್ ಠಾಣೆಯ 4 ಜನ ಪೊಲೀಸ್ ಕಾನ್ಸ್ಸ್ಟೇಬಲ್ಗಳನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ ಆದೇಶ ಹೊರಡಿಸಿದ್ದಾರೆ.
ಚೌಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೇಶುರಾವ, ಕಾನ್ಸ್ಸ್ಟೇಬಲ್ ಗಳಾದ ರಾಜಕುಮಾರ್, ಉಮೇಶ ಹಾಗೂ ಅಶೋಕ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಳೆದ ಅಕ್ಟೋಬರ್ 24ರಂದು ಸೇಡಂ ರಸ್ತೆಯ ಟೋಲ್ ಗೇಟ್ ಹತ್ತಿರದಿಂದ ಅಫಜಲಪುರ ನಿವಾಸಿ ದುಂಡಪ್ಪ ಜಮಾದಾರ್ ಎಂಬಾತರನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಅಂತ ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು.
ಈ ಕುರಿತು ದಕ್ಷಿಣ ವಲಯ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ಹಲ್ಲೆ ಮಾಡಿರುವದು ಸಾಭಿತಾಗಿದೆ. ಈ ಹಿನ್ನಲೆ ಚೌಕ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್ ನಾಯಕ್ ಅವರನ್ನು ಸೆಕ್ಷನ್ 7 ಅನ್ವಯ ಮುಂಬಡ್ತಿ ಮುಂದೂಡಿ ಹಾಗೂ 4 ಜನ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ.




