ಮಾಜಿ ಮೇಯರ್ ನಾರಾಯಣ್ ಅವರ ‘ಪೌರಬಂಧು’ ಆತ್ಮಚರಿತ್ರೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಮೈಸೂರು ; ಮಾಜಿ ಮೇಯರ್ ನಾರಾಯಣ್ ರವರ ಆತ್ಮಚರಿತ್ರೆ ಕುರಿತು “ಪೌರ ಬಂಧು” ಕೃತಿಯನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಎನ್.ರಾಚಯ್ಯ ಅಧ್ಯಯನ ಪೀಠದಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸಮಾರಂಭ ಆಯೋಜನೆ ಮಾಡಲಾಗಿತ್ತು. ದೀಪಾ ಬೆಳಗಿಸುವ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ, ಕೃತಿ ಲೋಕಾರ್ಪಣೆ ಮಾಡಿದರು.
ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾರಾಯಣ್ ಪೌರಕಾರ್ಮಿಕ ವರ್ಗಕ್ಕೆ ಸೇರಿದವರು. ಅವರ ತಂದೆ, ತಾಯಿ ಪೌರಕಾರ್ಮಿಕರಾಗಿದ್ದರು. ನಾರಾಯಣ್ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಹೋರಾಟ ಮಾಡ್ತಾ ಬಂದಿದ್ದಾರೆ. ನನಗೆ ಮತ್ತು ಪೌರಕಾರ್ಮಿಕರ ನಡುವೆ ಸಂಬಂಧ ಬೆಳೆಯಲು ನಾರಾಯಣ್ ಕಾರಣ. ನನ್ನ ಭೇಟಿಯಾದಾಗೆಲ್ಲಾ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಿದ್ರು. ಬಹುಮತ ಇಲ್ಲದಿದ್ರೂ ಬಹಳಷ್ಟು ಜನ ಕಾರ್ಪೋರೇಟರ್ ಬೆಂಬಲಿಸಿ ಮೇಯರ್ ಮಾಡಿದ್ರು. ಆಗ ನಮ್ಮ ಸರ್ಕಾರ ಅಧಿಕಾರದಲ್ಲಿರಲಿಲ್ಲ. ನಾನು ಹಠ ಮಾಡಿ ನಾರಾಯಣ್ ಅವರ ಮೇಯರ್ ಮಾಡಿದೆ ಎಂದರು.
ಕಟ್ಟಕಡೆಯ ಮನುಷ್ಯನನ್ನು ಮೊದಲ ಪ್ರಜೆ ಮಾಡಿದೆ. ಅವರೂ ಆ ಜವಾಬ್ದಾರಿಯನ್ನ ಬಳಸಿಕೊಂಡು ಪೌರಕಾರ್ಮಿಕರನ್ನ ಸಂಘಟಿಸಿ, ಸಮಸ್ಯೆ ಬಗೆಹರಿಸಲು ಮುಂದಾದರು. ಅವರ ಸಾರ್ವಜನಿಕ ಬದುಕಿನಲ್ಲಿ ಮರೆಯಲಾಗದ ಹೆಜ್ಜೆ ಗುರುತು ಬಿಟ್ಟಿದ್ದಾರೆ ಎಂದರು.
ಕೆಲವೊಂದು ಸಾರಿ ಚಳುವಳಿ ಮಾಡ್ಬೇಡ ಅಂದ್ರೂ ಮಾಡಿದ್ದರು. ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡೊದು ಮುಖ್ಯ ಅಂತಿದ್ದರು. ಪೌರಕಾರ್ಮಿಕರ ಅಭಿವೃದ್ಧಿ ನಿಗಮ ರಚನೆಗೆ ಒತ್ತಾಯ ಮಾಡಿ ಮಾಡಿಸಿದ್ದರು. ಪೌರಕಾರ್ಮಿಕರನ್ನ ಸಿಂಗಾಪೂರ್ ಗೆ ಕಳಿಸುವ ಕೆಲಸ ಮಾಡಿದ್ದೆ. ಇದಕ್ಕೆ ಕೆಲ ಐಎಎಸ್ ಅಧಿಕಾರಿಗಳು ವಿರೋಧ ಮಾಡಿದ್ದರು. ನಾರಾಯಣ ದಸರಾದಲ್ಲಿ ಕುದುರೆ ಮೇಲೆ ಕೂರು ಅಂದಿದ್ದೆ. ಅವರು ಹೆದರಿಕೊಂಡು ಬೇಡ ಅಂತಿದ್ದರು. ನಾನು ಅವರಿಗೆ ಧೈರ್ಯ ಹೇಳಿ ಕುದುರೆ ಸವಾರಿ ಮಾಡಿಸಿದ್ದೆ ಎಂದು ಹೇಳಿದರು.
ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಮೇಯರ್ ಆಗಿ, ಕುದುರೆ ಮೇಲೆ ಕೂತು ದಸರಾದಲ್ಲಿ ಮೆರವಣಿಗೆ ಮಾಡಿಸಿದ್ದು ನನಗೆ ಖುಷಿ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಸ್ಮರಿಸಿದರು.




