ಟಿಪ್ಪುಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ಮರು ಆಚರಣೆ ಆಗುವವರೆಗೆ ಹೋರಾಟ: ಬಿಎಸ್ಪಿ

ಚಿಕ್ಕಮಗಳೂರು: ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಬಿಜೆಪಿ ಸರ್ಕಾರ ದುರುದ್ದೇಶದಿಂದ ಕೈಬಿಟ್ಟಿದೆ. ಸರ್ಕಾರಿ ಕಾರ್ಯಕ್ರಮವಾಗಿ ಮರು ಆಚರಣೆ ಆಗುವವರೆಗೆ ಬಹುಜನ ಸಮಾಜ ಪಕ್ಷ ಹೋರಾಟ ನಡೆಸುತ್ತದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಎಚ್ಚರಿಸಿದರು.
ಬಹುಜನ ಸಮಾಜ ಪಾರ್ಟಿಯಿಂದ ಮೂಡಿಗೆರೆಯಲ್ಲಿ ಆಯೋಜಿಸಿದ್ದ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಅಧಿಕಾರದಲ್ಲಿದ್ದ ಟಿಪ್ಪುಸುಲ್ತಾನ್ ಕ್ರೂರಿಗಳನ್ನು ಮಟ್ಟಹಾಕಿದ್ದರು. ಮಠ, ಮಂದಿರ, ದೇಗುಲಗಳನ್ನು ಉಳಿಸಲು ಹತ್ತಾರು ಯುದ್ದ ನಡೆಸಿದರು. ಕರ್ನಾಟಕ ಸುಭದ್ರವಾಗಿರಲು ಟಿಪ್ಪು ಸುಲ್ತಾನ್ ಅವರ ಕೊಡುಗೆ ಅಪಾರವಾಗಿದೆ. ಮರಾಠರು ಶೃಂಗೇರಿ ಮಠವನ್ನು ಧ್ವಸಗೊಳಿಸಿ ದೇವರ ಮೂರ್ತಿಯನ್ನು ನಾಶಪಡಿಸಲು ಬಂದಾಗ ಟಿಪ್ಪುಸುಲ್ತಾನ್ ಶೃಂಗೇರಿಗೆ ಬಂದು ಮರಾಠರನ್ನು ಹೊಡೆದೋಡಿಸಿ ಮಠ ಉಳಿಸಿದ್ದಾರೆ. ರಾಜ್ಯವನ್ನು ಕ್ರೂರಿಗಳ ಕಪಿಮುಷ್ಟಿಯಿಂದ ಹೊರತರಲು ತಮ್ಮ ಮಕ್ಕಳನ್ನು ಒತ್ತೆಯಿರಿಸಿದ್ದರೆಂದು ತಿಳಿಸಿದ್ದರು.
ಮುಖಂಡ ಲೋಕವಳ್ಳಿ ರಮೇಶ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕೋಮುವಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕೊಲೆ ಸುಲಿಗೆ ಕಳ್ಳತನ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಮಿತಿಮೀರಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರತೀಕಾರ ಅಪರಾಧವಲ್ಲ ಎಂದು ಹೇಳಿಕೆ ನೀಡಿ ಕೋಮುವಾದಿಗಳನ್ನು ಬೆಂಬಲಿಸಿದ್ದಾರೆ. ಇಂತಹ ಮತಿಗೆಟ್ಟ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕರಿಸಲಿದ್ದಾರೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಸಿ.ಕೆ.ಇಬ್ರಾಹಿಂ, ಮೌಲಾನಾ ಶಫೀಯುಲ್ಲಾ ನಿಜಾಮಿ ಅಬ್ರಾರ್, ಯು.ಬಿ.ಮಂಜಯ್ಯ, ಫಿಶ್ ಮೋಣು, ಎ.ಸಿ.ಅಯೂಬ್ ಹಾಜಿ, ಬಕ್ಕಿ ಮಂಜು, ರಾಮು, ಶ್ರೀಕಾಂತ್, ಮಹೇಶ್ ಉದುಸೆ, ದೊಡ್ಡಯ್ಯ ಮತ್ತಿತರರು ಇದ್ದರು.




