ಕೊಡಗಿನಲ್ಲಿ ಕರಾಳ ದಿನಾಚರಣೆ – ಹಿಂದೂಪರ ಕಾರ್ಯಕರ್ತರ ಬಂಧನ

ಕೊಡಗು : ನವೆಂಬರ್ 10 ಕೊಡಗಿನ ಕರಾಳ ದಿನ ಆಚರಣೆ ಹಿನ್ನೆಲೆ ಕೊಡಗು ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿತ್ತು. ವಿಶ್ವ ಹಿಂದೂ ಪರಿಷತ್ ಹಾಗು ಹಿಂದು ಪರ ಸಂಘಟನೆಗಳು 2015ರಲ್ಲಿ ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮೃತಪಟ್ಟ ಕುಟ್ಟಪ್ಪ ಅವರ ಸ್ಮರಣಾರ್ಥ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಾಂತಿ ಪೂಜೆ ಸಲ್ಲಿಸಿ, ಮೆರವಣಿಗೆ ಹೊರಡುವ ತಯಾರಿಯಲ್ಲಿತ್ತು. ಅದ್ದರಿಂದ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಮುಗಿಸಿ ಹೊರ ಬಂದ ಹಿಂದೂ ಸಂಘಟನೆಗಳ ಪ್ರಮುಖರನ್ನು ಪೊಲೀಸರು ಬಂಧಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರನ್ನು ಕೂಡ ಬಂಧಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಇಂದು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ವಕೀಲ ಕೃಷ್ಣಮೂರ್ತಿ ಒಳಗೊಂಡಂತೆ ಹತ್ತು ಮಂದಿ ಓಂಕಾರೇಶ್ವರ ದೇವಾಲಯದ ಬಳಿ ಬಂಧನವಾಗಿದೆ.
ಓಂಕಾರ ಸದನದಲ್ಲಿ ಶಾಂತಿ ಪೂಜೆ ನೆರವೇರಿಸಿ ಹೊರಬರುತ್ತಿದ್ದಂತೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಒಳಗೊಂಡತೆ ಹತ್ತು ಮಂದಿ ಹಿಂದು ಪರ ಸಂಘಟನೆಯ ಮುಖಂಡರನ್ನು ಪೋಲೀಸರು ಬಂಧಿಸಿದ್ದು. ಮಡಿಕೇರಿಯಲ್ಲಿ ವಾತಾವರಣ ಗೊಂದಲಮಯವಾಗಿದೆ.
ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಹಾಗು ಮೆರವಣಿಗೆಯನ್ನು ಹಿಂದು ಪರ ಸಂಘಟನೆಗಳು ಘೋಷಿಸಿರುವ ಹಿನ್ನೆಲೆ ಇದೀಗ ಪೊಲೀಸರು ಹಾಗು ಸೈನಿಕರು ಶಸ್ತ್ರಾಸ್ತ್ರದಾರಿಗಳಾಗಿ ಕಾವಲು ಕಾಯುತ್ತಿದ್ದಾರೆ.
ಹಿಂದು ಸಂಘಟನೆಯ ಅಧ್ಯಕ್ಷರ ಬಂಧನದಿಂದ ಕಾರ್ಯಕರ್ತರು ಬೀದಿಗಿಳಿಯುವ ಸಂಭವವಿದೆ.




