ಬಾಗಲಕೋಟೆಯಲ್ಲಿ ನಟ ಪುನೀತ್ ರಾಜಕುಮಾರ್ ಅಗಲಿಕೆಗೆ ಭಾವಪೂರ್ಣ ಶ್ರದ್ಧಾಂಜಲಿ

ಬಾಗಲಕೋಟೆ: ಕನ್ನಡದ ನಟ ಪುನೀತ್ ರಾಜ್ ಕುಮಾರ್ ವಿಧಿವಶಕ್ಕೆ ಬಾಗಲಕೋಟೆ ಜಿಲ್ಲೆಯಾದ್ಯಂತ ಅಭಿಮಾನಿಗಳು ವಿವಿಧ ಸಂಘಟನೆಗಳ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬಾಗಲಕೋಟೆ ನಗರದ ಬಸವೇಶ್ವರ ವೃತ್ತ, ಹಾಗೂ ವಿದ್ಯಾಗಿರಿಯ ಇಂಜಿನಿಯರ್ ಕಾಲೇಜು ವೃತ್ತದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಪುನೀತ್ ರಾಜ್ ಕುಮಾರ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು. ಮೌನಾಚರಣೆ ಮೂಲಕ ಅಗಲಿದ ನಟ ಪುನೀತ್ ರಾಜಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ,ನಗರ ಅಧ್ಯಕ್ಷ ಬಸವರಾಜ ಅಂಬಿಗೇರ, ಸೇರಿದಂತೆ ಕರವೇ ಕಾರ್ಯಕರ್ತರು, ಅಭಿಮಾನಿಗಳಿದ್ದರು.ಇನ್ನು ಪುನೀತ್ ರಾಜಕುಮಾರ್ ಬಾಗಲಕೋಟೆ ಜಿಲ್ಲೆಯೊಂದಿಗೆ ನಂಟು ಹೊಂದಿದ್ದು ಸಿನಿಮಾ ಚಿತ್ರೀಕರಣಕ್ಕೆಂದು ಐತಿಹಾಸಿಕ ಬಾದಾಮಿ , ಮಹಾಕೂಟ , ಬನಶಂಕರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಮಹಾಕೂಟದಲ್ಲಿ ನಟ ಸಾರ್ವಭೌಮ ಚಿತ್ರೀಕರಣಗೊಂಡಿದ್ದು. ಈ ವೇಳೆ ನಟ ಪುನೀತ್ ರಾಜಕುಮಾರ್ ಬಾದಾಮಿಯಲ್ಲಿ ತಂಗಿದ್ದರು.ನಿರ್ದೇಶಕ ಪವನ್ ಒಡೆಯರ್ ಮದುವೆಗೆ ಬಾಗಲಕೋಟೆಗೆ ಬಂದಿದ್ದರು. ಬಾಗಲಕೋಟೆ ಜಿಲ್ಲೆಯಲ್ಲೂ ಪುನೀತ್ ರಾಜಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.




