ಕೊರೊನಾ ವಾರಿಯರ್ಸ್ಗೆ ಆಹಾರ ಕಿಟ್ ವಿತರಿಸಿದ ನಿಖಿಲ್

ರಾಮನಗರ: ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರಕ್ಕೆ ರಾಜೀವಗಾಂಧಿ ಆರೋಗ್ಯ ವಿವಿ ಮಂಜೂರು ಮಾಡಿದ್ದರು. ನಂತರ ಬಂದ ಸರಕಾರಗಳು ಕಾಮಗಾರಿ ಮುಗಿಸದೇ ಉದಾಸೀನತೆ ತೋರಿದ್ದರಿಂದ ರಾಮನಗರ ಜಿಲ್ಲೆಯ ಜನತೆ ಸೂಕ್ತ ಚಿಕಿತ್ಸೆಗೆ ಪಡಿಪಾಟಲು ಪಡುವಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಾಗಡಿ ತಾಲೂಕಿನ ಕುದೂರಿನ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುದೂರು ಹೋಬಳಿ ಮತ್ತು ತಿಪ್ಪಸಂದ್ರ ಹೋಬಳಿಯ ಎಲ್ಲಾ ಕೊರೊನಾ ವಾರಿಯರ್ಸ್ ಗಳಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಆಶಾ ಕಾರ್ಯಕರ್ತೆಯರು ಶುಶ್ರೂಷಕಿಯರು (ನರ್ಸ್ )ಹಾಗೂ ಮಾಗಡಿ ತಾಲ್ಲೂಕಿನ ಎಲ್ಲಾ ಬಸ್ ಚಾಲಕರು ನಿರ್ವಾಹಕರಿಗೆ ಜೆಡಿಎಸ್ ಯುವ ಘಟಕದ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಿಸಿ, ಮಾತನಾಡಿ, ರಾಮನಗರದಲ್ಲಿ ರಾಜೀವಗಾಂಧಿ ವಿವಿ ಸ್ಥಾಪನೆಯಾಗಿದ್ದರೇ ಪ್ರಸ್ತುತ ಜನರನ್ನು ಕಾಡುತ್ತಿರುವ ಕೊರೊನಾ ಜೊತೆಗೆ ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡಬಹುದಿತ್ತು ಎಂದರು. ಮುಂದಿನ ದಿನಗಳಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವೆಂದು ಹೇಳಿದರು.
ಮಾಗಡಿ ಶಾಸಕ ಎ. ಮಂಜುನಾಥ್ ಮಾತನಾಡಿ, ಸದ್ಯ ಮಾಗಡಿಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ಆರಂಭದಲ್ಲಿ ಸ್ವಲ್ಪ ಹೆಚ್ವಳವಾಗಿದ್ದು, ನಿಜ. ಇದನ್ನೇ ವಿರೋಧಿಗಳು ತಮ್ಮ ಬಾಯಿಗೆ ಬಂಡವಾಳ ಮಾಡಿಕೊಂಡರು. ರಾಜ್ಯದಲ್ಲಿ ಮಾಗಡಿಯಲ್ಲಿ ೫ ಬೆಡ್ ಗಳ ಸುಸಜ್ಜಿತ ಹೈಟೆಕ್ ಐಸಿಯೂ ನಿರ್ಮಾಣ ಮಾಡಲಾಗಿದೆ. ಖಾಸಗಿ ಕಂಪನಿಗಳ ಸಹಭಾಗಿತ್ವ ದಲ್ಲಿ ಇದನ್ನು ಮಾಡಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಕೊರೊನಾ ವಾರಿಯರ್ಸ್ ಗಳ ಸಮಾವೇಶ ಮಾಡಿ, ಅವರಿಗೆ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಸಹಾಯಹಸ್ತ ಚಾಚುವ ಭರವಸೆ ನೀಡಿದರು. ಸಮಾಜ ಸೇವಕರಾದ ಮಹದೇವ್ ಶಾಸ್ತ್ರಿ ಮುಂತಾದವರು ಹಾಜರಿದ್ದರು.




