Kalburgi Crime News: ನಾಯಿಯ ವಿಚಾರವಾಗಿ ನಡೆದಿದ್ದ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

ಕಲಬುರಗಿ: ನಾಯಿಯ ವಿಚಾರವಾಗಿ ಜಗಳ ತೆಗೆದು ಯುವಕನನ್ನು ಬರ್ಬರವಾಗಿ ಹತ್ಯೆಗೈದಿದ್ದ ಐವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈಕೋರ್ಟ್ ಬಳಿಯ ಅಕ್ಕಮಹಾದೇವಿ ಕಾಲೋನಿಯ ನಿವಾಸಿಗಳಾದ ಪವನ್@ ಅವಧೂತ ಜಾಗಿರ್ದಾರ್, ಪ್ರಸನ್ನ ಜಾಗಿರ್ದಾರ್, ಬ್ರಹ್ಮಪುರ ಶಾಸ್ತ್ರಿ ಚೌಕ್ ನಿವಾಸಿ ಸಂತೋಷ್ ಜಾನಿಬ, ಜೇವರ್ಗಿ ತಾಲೂಕಿನ ಬಳಬಟ್ಟಿ ತಾಂಡಾದ ಅಜಯ್ ರಾಥೋಡ್, ಅವಿನಾಶ್ ಚವ್ಹಾನ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ತಿಂಗಳು 24ರಂದು ಹೈಕೋರ್ಟ್ ಬಳಿ ಗುರುರಾಜ ಕುಲಕರ್ಣಿ ಎಂಬ ಯುವಕನನ್ನು ಕಲ್ಲಿನಿಂದ ಜಜ್ಜಿ ಆರೋಪಿಗಳು ಕೊಲೆಗೈದಿದ್ದರು. ಪ್ರಕರಣ ನಡೆದು 24ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ:
ಕೊಲೆಯಾದ ಗುರುರಾಜ್ನ ಸಹೋದರಿ ತಮ್ಮ ಮನೆಯ ಮುಂದೆ ನಾಯಿಗೆ ಬಿಸ್ಕೆಟ್ ಹಾಕುವಾಗ ಪಕ್ಕದ ಮನೆಯ ಪವನ್ ಕಲ್ಲು ಹೊಡೆದಿದ್ದನಂತೆ, ಇದೆ ವಿಚಾರಕ್ಕೆ ಜಗಳ ನಡೆದು ವಿಕೋಪಕ್ಕೆ ತಿರುಗಿ ವಾಗ್ವಾದ ನಡೆದಿತ್ತು. ನಂತರ ಪವನ ಹಾಗೂ ಆತನ ಸ್ನೇಹಿತರು ಸೇರಿ ಗುರುರಾಜ್ನ ಸಹೋಧರ ಶೇಶಗಿರಿ ಮೇಲೆ ಹಲ್ಲೆ ಮಾಡಿದ್ದರು. ಈ ವಿಚಾರವಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.
ಪ್ರಕರಣ ಹಿಂದೆ ತೆಗೆದುಕೊಂಡು ರಾಜೀಯಾಗುವಂತೆ ಪವನ ಹಾಗೂ ಸ್ನೇಹಿತರು ಶೇಶಗಿರಿ ಮೇಲೆ ಒತ್ತಡ ಹಾಕಿದ್ದರು. ಶೇಶಗಿರಿ ಪ್ರಕರಣ ಹಿಂಪಡೆಯುವದಕ್ಕೆ ರಾಜೀಯೂ ಆಗಿದ್ದನಂತೆ, ಆದ್ರೆ ಶೇಶಗಿರಿ ಸಹೋಧರ ಗುರುರಾಜ್ ಪ್ರಕರಣ ಹಿಂದಕ್ಕೆ ತೆಗೆದುಕೊಳ್ಳುವದಿಲ್ಲ ಅಂತ ಪಟ್ಟು ಹಿಡಿದು ಜಗಳವಾಡಿದ್ದನಂತೆ. ಹೀಗಾಗಿ ಗುರುರಾಜನ ಕೊಲೆಗೆ ಪವನ ಮತ್ತು ಆತನ ಸಹೋಧರ ಪ್ರಸನ್ ಇಬ್ಬರು ಸೇರಿ ಐದು ಲಕ್ಷ ರೂಪಾಯಿ ಸುಪಾರಿ ನೀಡಿದ್ದರು. ಪ್ಲ್ಯಾನ್ ನಂತೆ ಗುರುರಾಜನನ್ನು ಹೈಕೋರ್ಟ್ ಬಳಿ ಕರೆಸಿ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.




