ಆರ್ಥಿಕವಾಗಿ ಮೇಲೇಳಲು ಒಗ್ಗೂಡಿ ಕೆಲಸ ಮಾಡಬೇಕಿದೆ: ಬೊಮ್ಮಾಯಿ

ಬೆಂಗಳೂರು: ಕೊರೋನಾ ಮತ್ತು ಇತ್ತೀಚಿಗೆ ಸುರಿದ ಮಳೆ ಮತ್ತು ನೆರೆ ಹಾವಳಿಯಿಂದ ಸಾಕಷ್ಟು ಪ್ರಾಣ ಮತ್ತು ಆರ್ಥಿಕವಾಗಿ ದೊಡ್ಡ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಸಂತಾಪ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನ ಕಾಲಘಟ್ಟದಲ್ಲಿ ವೈದ್ಯರು ಮತ್ತು ದಾದಿಯರನ್ನು ಕಳೆದುಕೊಂಡಿದ್ದೇವೆ. ಇದರ ಜೊತೆಗೆ ರಾಜಕ್ಕೆ, ದೇಶಕ್ಕೆ ದೊಡ್ಡ ಆರ್ಥಿಕ ನಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲಲು ಎಲ್ಲರೂ ಒಂದುಗೂಡಿ ಕೆಲಸ ಮಾಡಬೇಕಿದೆ ಎಂದರು.
ಇದೇ ವೇಳೆ, ರೈತಾಪಿ ಸಮುದಾಯದ ಅಭಿವೃದ್ಧಿಗೆ ಮಾಜಿ ಸಚಿವ ಸಿ.ಎಂ. ಉದಾಸಿ ನೀಡಿರುವ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಉದಾಸಿ ಆಗಲಿಕೆ ನನ್ನ ಪಾಲಿಗೆ ಬಹಳ ದೊಡ್ಡ ನಷ್ಟ. ತಂದೆ ಸಮಾನ ರಾಗಿದ್ದ ಉದಾಸಿ ನನ್ನ ರಾಜಕೀಯ ಜೀವನದ ಬೆಳವಣಿಗೆಯಲ್ಲೂ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಕೊಂಡಾಡಿದರು.
