
ಕಳೆದ ಆರು ತಿಂಗಳಿನಿಂದಲೂ ಗುಜರಾತ್ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲು ಮುಹೂರ್ತ ಹುಡುಕಲಾಗಿತ್ತು. ಸಿ ಆರ್ ಪಾಟೀಲ್ ಗುಜರಾತ್ ಬಿಜೆಪಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಆಡಳಿತ ವೈಫಲ್ಯಗಳ ಜೊತೆಗೆ ಈ ಕಾರಣವೂ ತಳುಕು ಹಾಕಿಕೊಂಡಿದೆ.
ಎಂ ಹೈದರ್
ತನ್ನ ಆಡಳಿತದಲ್ಲಿನ ವೈಫಲ್ಯಗಳಿಗೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಹೊಣೆಗಾರರನ್ನಾಗಿಸಿ ಅವಧಿಗೆ ಮುನ್ನವೇ ರಾಜೀನಾಮೆ ಪಡೆಯುವ ತಂತ್ರದ ಭಾಗವಾಗಿ ಬಿಜೆಪಿಯ ಹೈಕಮಾಂಡ್ ನಿನ್ನೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯ ರಾಜೀನಾಮೆ ಪಡೆದಿದೆ.
ಮಾತು ಮಾತಿಗೂ ಗುಜರಾತ್ ಮಾಡಲ್ ಎನ್ನುವ ಬಿಜೆಪಿ ಗುಜರಾತ್ ವಿಪರೀತವಾಗಿ ವಿಕಾಸ ಹೊಂದಿದೆ ಎಂದು ಬೊಗಳೆ ಪ್ರಚಾರ ಮಾಡಿ ತನ್ನ ರಾಜ್ಯದ ಉದ್ಯಮಪತಿಗಳ ವಿಕಾಸವನ್ನಲ್ಲದೆ ಬೇರೆನೂ ಮಾಡಿಲ್ಲ ಎಂಬುದು ಬಿಜೆಪಿಯ ಸುಳ್ಳಿನ ಅತಿಯಾದ ಪ್ರಚಾರದ ನಡುವೆಯು ಜನ ವಾಸ್ತವವನ್ನು ಗ್ರಹಿಸುತ್ತಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾರದೆ, ತನ್ನ ಭಕ್ತರ ಕಣ್ಣಿಗೆ ಮಣ್ಣೆರಚಲು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗಳನ್ನು ಬದಲಾಯಿಸಿ ಚುನಾವಣೆಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಸುರುವಿಟ್ಟುಕೊಂಡಿದೆ.
ಆನಂದಿ ಬೆಹನ್ ಪಟೇಲ್ ಅವರ ರಾಜೀನಾಮೆ ಪಡೆದು ಅಮಿತ್ ಶಾ ಆಪ್ತ ವಿಜಯ್ ರೂಪಾನಿಯನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿ ಒಂದು ಚುನಾವಣೆಯನ್ನು ಗೆದ್ದ ಬಿಜೆಪಿ ತನ್ನ ಆಡಳಿತದ ವೈಫಲ್ಯದಿಂದಾಗಿ ಗುಜರಾತಿನಲ್ಲಿ ಇನ್ನು 15 ತಿಂಗಳಲ್ಲಿ ನಡೆಯಲಿರುವ ಚುನಾವಣೆಯನ್ನು ಗೆಲ್ಲುವುದು ಅಸಾಧ್ಯ ಎಂಬ ಅಳುಕಿನಿಂದ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಜನ ಮಾತನಾಡುವಂತಾಗಿದೆ.
ಕಳೆದ ಕೆಲ ತಿಂಗಳಲ್ಲೇ ಉತ್ತರಾಖಂಡದಲ್ಲಿ ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಬದಲಾಯಿಸಿ ಕಳೆದ ಜುಲೈ 26ಕ್ಕೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ಪಡೆದಿತ್ತು ಈಗ ಅದರ ಮುಂದುವರೆದ ಭಾಗವಾಗಿ ಗುಜರಾತ್ ಮುಖ್ಯಮಂತ್ರಿಯ ರಾಜೀನಾಮೆ ಪಡೆದಿದೆ.
ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಗುಜರಾತ್ ನಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಗುಜರಾತ್ ಮಾಡೆಲ್ ಸಂಪೂರ್ಣ ಧರಾಶಾಹಿಯಾಗಿದೆ. ಅಸಲಿಗೆ ಗುಜರಾತ್ ಮಾಡಲ್ ಎಂಬುದು ಒಂದು ಸುಳ್ಳು ಪ್ರಚಾರವಾಗಿತ್ತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಕಳೆದ ಆರು ತಿಂಗಳಿನಿಂದಲೂ ಗುಜರಾತ್ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲು ಮುಹೂರ್ತ ಹುಡುಕಲಾಗಿತ್ತು. ಸಿ ಆರ್ ಪಾಟೀಲ್ ಗುಜರಾತ್ ಬಿಜೆಪಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಆಡಳಿತ ವೈಫಲ್ಯಗಳ ಜೊತೆಗೆ ಈ ಕಾರಣವೂ ತಳುಕು ಹಾಕಿಕೊಂಡಿದೆ.
ಈಗ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಮುಂದಿನ ಆಯ್ಕೆ ಯಾರು ಎಂಬ ಲೆಕ್ಕಾಚಾರದಲ್ಲಿ ಗುಜರಾತ್ ಸಿಎಂ ರೇಸ್ ನಲ್ಲಿ ಕೆಲವು ಹೆಸರುಗಳು ಮುಂಚೂಣಿಗೆ ಬಂದಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ, ಪುರುಷೋತ್ತಮ್ ರೂಪಾಲ ಹಾಗೂ ಆರ್ಸಿ ಫಾಲ್ಡು ಹೆಸರುಗಳು ಗುಜರಾತ್ ಸಿಎಂ ರೇಸ್ನಲ್ಲಿ ಕೇಳಿಬಂದಿದೆ ಮುಂದಿನ ಚುನಾವಣೆಯನ್ನು ಗೆಲ್ಲುವ ತಂತ್ರವಾಗಿ ಜಾತಿ ಲೆಕ್ಕಾಚಾರದ ಮೂಲಕ ಸಮುದಾಯವನ್ನು ಓಲೈಕೆ ಮಾಡಲು ಚುನಾವಣೆ ಗೆಲ್ಲುವ ತಂತ್ರದ ಭಾಗವಾಗಿ ಈ ಮುಖ್ಯಮಂತ್ರಿ ಬದಲಾವಣೆ ನಡೆದಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.



