ಹು-ಧಾ ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಕೊರೊನಾ ರೂಲ್ಸ್ ಮರೆತು ಮುಗಿಬಿದ್ದ ಜನ

ಹುಬ್ಬಳ್ಳಿ: ಮಹಾರಾಷ್ಟ್ರ ಸೇರಿದಂತೆ ಕೇರಳ ರಾಜ್ಯಗಳಲ್ಲಿ ಕೋವಿಡ್ -19 ವೈರಸ್ ತನ್ನ ಅರ್ಭಟ್ ಮುಂದುವರಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೈರಸ್ ಹರಡುವಿಕೆ ತಡೆಯಲು ಕಠಿಣ ಕೊರೊನಾ ರೂಲ್ಸ್ಗಳನ್ನು ಜಾರಿಗೆ ಮಾಡಿದೆ. ಆದರೆ ಹುಬ್ಬಳ್ಳಿ ಧಾರವಾಡ ಮಾರುಕಟ್ಟೆ ಪ್ರದೇಶದಲ್ಲಿ ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಜನರು ಗಣೇಶ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ದುರ್ಗದ್ ಬೈಲ್, ಜನತಾ ಬಜಾರ ಹಾಗೂ ಪೇಡಾ ನಗರಿ ಧಾರವಾಡದ ಸುಭಾಷ್ ರಸ್ತೆ, ನೆಹರು ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಜನರು ಹರಿದು ಬರುತ್ತಿದ್ದಾರೆ. ಗಣೇಶ ಹಬ್ಬ ಆಚರಣೆಗೆ ಒಂದೇ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಈಗ ಅವಳಿನಗರ ಜನರು ಮಾರುಕಟ್ಟೆ ಪ್ರದೇಶದಲ್ಲಿ ಕೊರೊನಾ ನಿಯಮಗಳನ್ನು ಮರೆತು ಹಬ್ಬದ ಸಾಮಗ್ರಿಗಳ ಖರೀದಿಗೆ ಮುಗಿ ಬಿದ್ದಿರುವ ದೃಶ್ಯಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿವೆ.
3ನೆಯ ಅಲೆ ಆತಂಕದ ನಡುವೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಪ್ರತ್ಯೇಕವಾಗಿ ಗಣೇಶೋತ್ಸವಕ್ಕೆ ಮಾರ್ಗ ಸೂಚಿಗಳನ್ನು ಹೊರಡಿಸಿದ್ದು, ಇಷ್ಟಿದ್ದರೂ ಕೂಡಾ ಅವಳಿನಗರ ಜನತೆ ಸೇರಿದಂತೆ ವ್ಯಾಪಾರಸ್ಥರು ಕೋವಿಡ್-19 ಮಾರ್ಗಸೂಚಿಗಳಿಗೆ ಗಮನ ಕೊಡುತ್ತಲೇ ಇಲ್ಲ. ಜನರು ಹಿಂಡು ಹಿಂಡಾಗಿ ಸೇರಿ ಖರೀದಿಗೆ ಆಗಮಿಸುತ್ತಿದ್ದು, ವ್ಯಾಪಾರಸ್ಥರು ನಿಯಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಪಾಲಿಕೆಯಿಂದ ಮಾರ್ಷಲ್ ನೇಮಕ ಮಾಡಿದರೂ ಸಹ ಉಪಯೋಗ ಇಲ್ಲದಂತಾಗಿದೆ.




