ಕಾಂಗ್ರೆಸ್ ಭದ್ರಕೋಟೆಯಲ್ಲಿ ಅರಳಿದ ಕಮಲ: ಹೆಬ್ಬಾಳ್ಕರ್ – ಫಿರೋಜ್ ಸೇಠ್ ಗೆ ಮುಖಭಂಗ

ಬೆಳಗಾವಿ : ಸ್ಥಳೀಯ ನಾಯಕತ್ವದ ಕಡೆಗಣನೆ ಮಾಡಿದ ಕಾಂಗ್ರೆಸ್ ವರಿಷ್ಠರು ಎಂ.ಬಿ.ಪಾಟೀಲ ಅವರನ್ನು ಚುನಾವಣೆ ಉಸ್ತುವಾರಿ ಮಾಡಿ ತಪ್ಪು ಮಾಡಿತು ಎನ್ನುವ ಸಂಶಯ ಇದೀಗ ಕಾಡತೊಡಗಿದೆ. ಬೆಳಗಾವಿ ನಗರದ ಮಾಜಿ ಶಾಸಕ ಫಿರೋಜ್ ಸೇಠ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರಾಮುಖ್ಯತೆ ನೀಡಿ ಸತೀಶ್ ಜಾರಕಿಹೊಳಿ ಅವರನ್ನ ಟಿಕೆಟ್ ವಿಚಾರದಲ್ಲಿ ಸೈಲೆಂಟ್ ಕೂಡ ಮಾಡಲಾಗಿತ್ತು.
ಬಿಜೆಪಿ ನಾಯಕರು ಕೊನೆಯ ಕ್ಷಣದವರೆಗೂ ಜಿದ್ದಿಗೆ ಬಿದ್ದಂತೆ ಮತ ಕೇಳಿ ಸಾಕಷ್ಟು ಭರವಸೆಗಳ ಮತದಾರರಿಗೆ ನೀಡಿ ಯುವ ಸಮೂಹವನ್ನು ಮುಂದೆ ಬಿಟ್ಟು ಗೆಲ್ಲುವಲ್ಲಿ ಸಫಲರಾಗಿದ್ದಾರೆ,ಇದರ ಸಂಪೂರ್ಣ ಕ್ರೆಡಿಟ್ ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಗೆ ಸಲ್ಲುತ್ತಿದ್ದು, ಮುಂದಿನ ದಿನಗಳಲ್ಲಿ ಇಬ್ಬರಲ್ಲಿ ಒಬ್ಬರು ಮಂತ್ರಿಯಾದರು ಅಚ್ಚರಿ ಪಡಬೇಕಾಗಿಲ್ಲ.
ಇನ್ನು ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿ, ಹೆಬ್ಬಾಳ್ಕರ್, ಫಿರೋಜ್ ಸೇಠ್ ವಾರ್ಡ್ ನಲ್ಲಿಯೇ ನೆಲಕಚ್ಚಿದೆ. ಇವರ ಮನೆ ಇರುವ 32ನೇ ವಾರ್ಡ್ ನಲ್ಲಿಯೇ ಬಿಜೆಪಿ ಗೆಲುವು ಸಾಧಿಸಿದ್ದು, ಸ್ಥಳೀಯ ಬಿಜೆಪಿ ನಾಯಕರಿಗೆ ಇನ್ನಿಲ್ಲದ ಹುಮ್ಮಸ್ಸು ತಂದಿದೆ.
ಇನ್ನು ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ತಮ್ಮ ನಿಷ್ಠರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಹೆಬ್ಬಾಳ್ಕರ್ ಹಾಗೂ ಫಿರೋಜ್ ಸೇಠ್ ಅವರನ್ನ ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದು, ತಂತ್ರಗಾರಿಕೆ ಇಲ್ಲದೇ ಸೋಲುಪ್ಪಿಕೊಂಡಿದ್ದಾರೆ.
