ಕಲ್ಬುರ್ಗಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ; ಪೊಲೀಸ್ ಕಮೀಷನರ್ ಅಮಾನತಿಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರನ್ನು ಕಲಬುರ್ಗಿ ನಗರ ಪೊಲೀಸ್ ಕಮಿಷನರ್ ಅಮಾನುಷ್ಯವಾಗಿ ಥಳಿಸಿದ್ದಾರೆಂಬ ಆರೋಪದ ಹಿನ್ನಲೆ ಅವರನ್ನು ಅಮಾನತ್ತು ಮಾಡುವಂತೆ ಗೃಹ ಸಚಿವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಗ್ರಹಿಸಿದ್ದಾರೆ.
ಈ ಕುರಿತಾಗಿ ತಮ್ಮ ಟ್ವಿಟರ್ ಖಾತೆಗಳಲ್ಲಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್, “ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಕಲಬುರಗಿ ನಗರ ಪೊಲೀಸ್ ಆಯುಕ್ತರು ನಡೆಸಿರುವ ಅಮಾನವೀಯ ಹಲ್ಲೆ ಅಕ್ಷಮ್ಯ ಹಾಗೂ ಖಂಡನೀಯ. ಸರ್ಕಾರ ಹಾಗೂ ಗೃಹಸಚಿವರು ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಿ ಸೂಕ್ತ ತನಿಖೆಗೆ ಆದೇಶಿಸಬೇಕು. ಪೊಲೀಸ್ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆಡಳಿತ ಪಕ್ಷದ ಕೈಗೊಂಬೆಯಾಗಿರುವುದು ದುರಂತ” ಎಂದು ಟ್ವಿಟ್ ಮಾಡಿದ್ದಾರೆ.
ಏನಿದು ಆರೋಪ:
ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನ್ನಿಸಾ ಫಾತಿಮಾ ಅವರ ಆಪ್ತ ಸಹಾಯಕ ಆದಿಲ್ ಶಾಹಿಲ್ಗೆ ರಾತ್ರಿ ಹಪ್ತ ಗುಂಮಜ್ ಬಳಿ ಕಮಿಷನರ್ ರವಿಕುಮಾರ ಬಾಸುಂಡೆ ಬರೋಹಾಗೆ ಹೊಡೆದಿದ್ದಾರೆ. ಶಾಸಕರ ಗನ್ ಮ್ಯಾನ್, ಇತರರು ಎಷ್ಟೆ ಹೇಳಿದರು ಕೇಳದೆ ಅವರ ಮೇಲೆಯೂ ಹಲ್ಲೆ ಮಾಡಲು ಯತ್ನಿಸಿದ್ದಾರೆ ಅಂತ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಆರೋಪ ತಳ್ಳಿ ಹಾಕಿದ ಪೊಲೀಸ್ ಆಯುಕ್ತರು:
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತರಾದ ವೈಎಸ್ ರವಿಕುಮಾರ್ ಇದೊಂದು ಸುಳ್ಳು ಆರೋಪ. ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ ಅಂತ ಆರೋಪವನ್ನು ತಳ್ಳಿ ಹಾಕಿದ್ದಾರೆ.
