ನೊಂದ ಮನ-ಮನೆಗಳಿಗೆ ಮರುಜೀವ ಕೊಟ್ಟ ಟೆಕ್ಸಾಸ್ ಸಂಸ್ಥೆ

ಕೊಡಗು : ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ಮನೆಗಳನ್ನು ಕಳೆದುಕೊಂಡವರು ಹಾಗೂ ಭಾರೀ ಮಳೆಗೆ ತುತ್ತಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಮನೆಗಳ, ಮಾಲೀಕರ ಮನದಲ್ಲಿ ಅಮೇರಿಕಾದ ಟೆಕ್ಸಾಸ್ ಸಂಸ್ಥೆ ನೆಮ್ಮದಿಯ ಭಾವ ತುಂಬಿದೆ
2018 ರಿಂದ ಕೊಡಗಿನಲ್ಲಿ ಭಾರೀ ಮಳೆಗೆ ಹಾನಿಗೊಳಗೊಂಡು ಮನೆ ಕಳೆದು ಕೊಂಡಿದ್ದ ಮತ್ತು ಶಿಥಿಲಾವಸ್ಥೆ ತಲುಪಿದ್ದ ಮನೆಗಳನ್ನು ತೆರವುಗೊಳಿಸಿ ಹೊಸ ಮನೆಗಳನ್ನು ನಿರ್ಮಿಸುವ ಮೂಲಕ ನೊಂದ ಮನಗಳಿಗೆ ಸಂಸ್ಥೆ ಮರುಜೀವನ ಕಲ್ಪಿಸಿದ್ದರೆ, ವಾಸಕ್ಕೆ ಆಯೋಗ್ಯವಾಗಿದ್ದ ಮನೆಗಳನ್ನು ರಿಪೇರಿ ಮಾಡುವ ಮೂಲಕ ಮನೆ ಕಳೆದುಕೊಂಡವರ ಮನದಲ್ಲಿ ನೆಮ್ಮದಿ ಮೂಡಿಸಿದೆ.
ಕರ್ನಾಟಕ ರಕ್ಚಣಾ ವೇದಿಕೆಯ ಶಿವರಾಮೆ ಗೌಡರ ಬಣದ ಪ್ರಯತ್ನದ ಫಲವಾಗಿ ಸುಮಾರು 12 ಕುಟುಂಬಗಳಿಗೆ ಹೊಸ ಮನೆಯ ಬಾಗ್ಯ ದೊರೆತಿದೆ. ಅತಿವೃಷ್ಟಿಯಿಂದ ನಲುಗಿದ್ದ ಸೋಮವಾರಪೇಟೆ ತಾಲೂಕಿನ, ರಾಮನ ಹಳ್ಳಿ, ಶನಿವಾರಸಂತೆ, ಸುರಗುಂದ ಮತ್ತು ಗೌಡಳ್ಳಿ ವ್ಯಾಪ್ತಿಯ ಸುಮಾರು 12 ಕುಟುಂಬಗಳಿಗೆ ಅಮೇರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯು ನೆರವಿನ ಹಸ್ತ ಚಾಚಿದೆ. ಶನಿವಾರಸಂತೆ ಹಾಗೂ ನಂದಿಗುಂದ ಗ್ರಾಮದ 4 ಕುಟುಂಬಗಳಿಗೆ ಹೊಸಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಮೂಲಕ ಸಂತಸ್ತರ ಮೊಗದಲ್ಲಿ ಸಂತಸ ಮೂಡಿಸಿದೆ.
ಅತಿವೃಷ್ಟಿಯಿಂದಾಗಿ ಈ ಭಾಗದ ಕೂಲಿ ಕಾರ್ಮಿಕರ ಮನೆಗಳು ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದವು. ಕೆಲವರ ಮನೆಗಳು ಕುಸಿದು ಬಿದ್ದು ಕಾಫಿತೋಟಗಳಲ್ಲಿ ದಿನಗೂಲಿ ಕಾರ್ಮಿಕರಾಗಿರುವ ಇವರುಗಳಿಗೆ ನೂತನ ಮನೆ ನಿರ್ಮಾಣ ಕನಸಾಗಿತ್ತು. ಸನ್ನಿವೇಶದಲ್ಲಿ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಇನ್ಸಿಸ್ ಡಿಸೋಜ ಅವರು ಇಂಡಿಯಾ ಸಂಸ್ಥೆಯ ಪ್ರಮುಖರ ಗಮನ ಸೆಳೆದು, ಬಡ ವರ್ಗಕ್ಕೆ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಂಸ್ಥೆಯ ಅಧಿಕಾರಿಗಳು, ಸಮಗ್ರ ಮಾಹಿತಿ ಸಂಗ್ರಹಿಸಿ, ಟೆಕ್ಸಾಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಮನೆಗಳ ನಿರ್ಮಾಣಕ್ಕೆ ಮುಂದಾದರು. ಟೆಕ್ಸಾಸ್ ಸಂಸ್ಥೆಯು ಮಾನವೀಯತೆ ಮೆರೆದಿದೆ.
ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ಗೌಡಳ್ಳಿ ಗ್ರಾಮ ಪಂಚಾಯತ್ ವಿಭಾಗದಲ್ಲಿ ಗಾಳಿ ಮಳೆಯಿಂದ ಹಾನಿಯಾಗಿದ್ದ ಮತ್ತು ಬಿದ್ದುಹೋಗಿದ್ದ ಮನೆಗಳನ್ನು ಕರವೇ ಕಾರ್ಯಕರ್ತರು ಗುರುತಿಸಿ 40 ಜನರ ಲಿಸ್ಟನ್ನು ತಯಾರು ಮಾಡಿ ಹೆಬಿಟೆಟ್ ಸಂಸ್ಥೆಯವರಿಗೆ ಈ ಲಿಸ್ಟ್ ಅನ್ನು ತೋರಿಸಿ ಮನವಿ ಮಾಡಿದಾಗ ಹೆಬಿಟೆಟ್ ಸಂಸ್ಥೆಯವರು ಖುದ್ದಾಗಿ ಬಂದು ಕರವೇ ಕಾರ್ಯಕರ್ತರು ಮಾಡಿದ ಲಿಸ್ಟನ್ನು ನೋಡಿ ಮತ್ತು ಮನೆಗಳನ್ನು ನೋಡಿ ಹೋಗಿದ್ದರು. ಮನೆಗಳನ್ನು ಟೆಕ್ಸಾಸ್ ಸಂಸ್ಥೆಯ ಸಹಕಾರದೊಂದಿಗೆ ಹೆಬಿಟೆಟ್ ಸಂಸ್ಥೆ ರವರು ಮನೆಗಳ ನಿರ್ಮಾಣವನ್ನು ಮಾಡಿರುತ್ತಾರೆ. 4 ಆರ್ ಸಿಸಿ ಮನೆಗಳು ಮತ್ತು 2 ಶೀಟ್ ಮನೆಗಳು ಮತ್ತು 6 ಹಳೆ ಮನೆ ದುರಸ್ತಿ ಮಾಡಿರುತ್ತಾರೆ.
ಟೆಕ್ಸಾಸ್ ಸಂಸ್ಥೆಯವರಿಗೆ ಮತ್ತು ಹೆಬಿಟೆಟ್ ಸಂಸ್ಥೆಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮಾನ್ ಫ್ರಾನ್ಸಿಸ್ ಡಿಸೋಜಾ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.




