ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ಹಾಕಿದ ಪೊಲೀಸರು

ಮಂಡ್ಯ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲದಿದ್ದರೆ 500 ರೂ. ದಂಡ ವಿಧಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅದನ್ನೇ ಬಂಡವಾಳ ಮಾಡಿಕೊಂಡು ಬೈಕ್ ಸವಾರರನ್ನು ದರೋಡೆಕೋರರ ರೀತಿ ಹಿಡಿಯೋ ಪೊಲೀಸರು, ಕಾರಿನಲ್ಲಿ ಹೋಗುತ್ತಿರುವವರಿಗೂ ಹೆಲ್ಮೆಟ್ ಹಾಕಿಲ್ಲ ಅಂಥ ದಂಡ ವಿಧಿಸುವ ಮೂಲಕ ತಮ್ಮ ಕರ್ತವ್ಯ ಎಷ್ಟು ಪ್ರಾಮಾಣಿಕವಾಗಿ ನಡೀತಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ಹೌದು, ಮಂಡ್ಯ ನಗರದ ಹಲವು ರಸ್ತೆಗಳಲ್ಲಿ ಹೆಲ್ಮೆಟ್ ಹಾಕದೆ ಬರುವ ಬೈಕ್ ಸವಾರರನ್ನು ಹಿಡಿಯಲು, ಪಾಕಿಸ್ತಾನ ಗಡಿಯಲ್ಲಿ ಉಗ್ರರು ನುಸುಳದಂತೆ ಕಾದಿರುವ ಯೋಧರ ರೀತಿಯಲ್ಲಿ ನಮ್ಮ ಪೊಲೀಸರು ಕಾದು ನಿಂತಿರುತ್ತಾರೆ. ಬೈಕ್ ಕೀ ಕಿತ್ತುಕೊಳ್ಳಬಾರದು, ಸ್ಥಳದಲ್ಲೇ ದಂಡ ಪಾವತಿಗೆ ಒತ್ತಡ ಹಾಕಬಾರದು ಎಂಬ ನಿಯಮವಿದೆ. ಅದ್ರೂ ಕೂಡ ರಸ್ತೆಯಲ್ಲಿ ಪಿಕ್ ಪ್ಯಾಕೆಟ್ ಮಾಡುವ ರೀತಿಯಲ್ಲಿ ನಮ್ಮ ಪೊಲೀಸರು ಹಗಲು ದರೋಡೆ ಮಾಡೋದನ್ನು ಮಾತ್ರ ಇನ್ನೂ ಬಿಟ್ಟಿಲ್ಲ.
ಹೆಲ್ಮೆಟ್ ಗುಂಗು ಪೊಲೀಸರಿಗೆ ಯಾವ ಮಟ್ಟಿಗೆ ನೆತ್ತಿಗೇರಿದೆ ಅಂದ್ರೆ, ಕಾರಿನಲ್ಲಿ ಬಂದ ವ್ಯಕ್ತಿಗೂ ಹೆಲ್ಮೆಟ್ ಧರಿಸಿಲ್ಲ ಅಂಥ ದಂಡ ವಿಧಿಸಿದ್ದಾರೆ. ಪುಟ್ಟರಾಜು ಎಂಬುವರ ಪುತ್ರ ಆನಂದ್ ತಮ್ಮ ಕೆ.ಎ 42, ಎಂ 2147 ನಂಬರಿನ ಸ್ವಿಪ್ಟ್ ಕಾರಿನಲ್ಲಿ ಹೋಗುತ್ತಿದ್ದರು. ಅವರನ್ನು ತಡೆದ ಮಂಡ್ಯದ ಸೆಂಟ್ರಲ್ ಠಾಣೆ ಪೊಲೀಸರು ಎಲ್ಲಾ ದಾಖಲಾತಿ ಪರಿಶೀಲಿಸಿದ್ದಾರೆ. ಎಲ್ಲಾ ಸರಿಯಿದ್ದುದರಿಂದ ಏನಾದರೂ ಸರಿ ದಂಡ ಹಾಕಲೇಬೇಕೆಂದು ಹೆಲ್ಮೆಟ್ ಹಾಕಿಲ್ಲ ಅಂಥ 500 ರೂಪಾಯಿ ದಂಡ ವಿಧಿಸಿದ್ದಾರೆ.
ಒಟ್ನಲ್ಲಿ, ಮಂಡ್ಯ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಇಂಥದೊಂದು ದಂಧೆ ವ್ಯಾಪಕವಾಗಿ ನಡೀತಿದೆ. ನಾವು ದೇಶಪ್ರೇಮಿಗಳು, ದೇಶೋದ್ದಾರಕರು, ಜನರ ಸೇವಕರು ಅಂಥ ಬೊಗಳೆ ಬಿಡೋ ರಾಜಕಾರಣಿಗಳು ಇದ್ರ ಬಗ್ಗೆ ಕ್ಯಾರೆ ಅನ್ನದಿರೋದು ದುರಂತ.




