ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ; ಸಹಕಾರ ನೀಡಿದ ಸತೀಶ್ ಜಾರಕಿಹೊಳಿಗೆ ಸನ್ಮಾನ

ಗೋಕಾಕ : ಆಗಸ್ಟ್ 10ರಿಂದ 15ರವರೆಗೆ ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡ ಕ್ರೀಡಾಪಟುಗಳು ಶನಿವಾರ ಗೋಕಾಕನ ಹಿಲ್ ಗಾರ್ಡನ್ ಕಚೇರಿಗೆ ಆಗಮಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸನ್ಮಾನಿಸಿ, ಗೌರವಿಸಿದರು.
ಇತ್ತಿಚೇಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕರಾದ ರಾಹುಲ್ , ಪ್ರಿಯಾಂಕಾ ಜಾರಕಿಹೊಳಿ , ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸತ್ಕರಿಸಿದರು.

ಸನ್ಮಾನ ಸ್ವೀಕರಿಸಿ ಸತೀಶ್ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಇದಾರೆ. ಆದರೆ ಅವರೆಲ್ಲರಿಗೂ ಆರ್ಥಿಕ ಸೇರಿ ವಿವಿಧ ತೊಂದರೆಗಳಿಂದ ಮುಂಚೂಣಿಗೆ ಬರಲಾಗುತ್ತಿಲ್ಲ. ಇದರಿಂದ ನಾವು ಕ್ರೀಡೆಯಲ್ಲಿ ಆಸಕ್ತಿ ಇರುವವರಿಗೆ ಕೈಲಾದ ಸಹಾಯ ಮಾಡುವ ಮೂಲಕ ಪ್ರೋತ್ಸಾಹ ಮಾಡಲಾಗುತ್ತಿದೆ ಎಂದರು.
ನೇಪಾಳದಲ್ಲಿ ನಡೆದ ಕಬಡ್ಡಿಯಲ್ಲಿ ಪಂದ್ಯಾವಳಿ ಭಾಗವಹಿಸಲು ಹೊರಟ್ಟಿದ್ದ ಕ್ರೀಡಾಪಟುಗಳಿಗೆ ಸಹಾಯ ಮಾಡಿದ್ದೆವು. ಅವರು ಸಹ ಭಾಗವಹಿಸಿ, ಯಶಸ್ವಿಯಾಗಿ ಬಂದಿದ್ದಾರೆ. ಸಹಾಯ ಮಾಡುವುದು ನಮ್ಮ ಕರ್ತವ್ಯ ಆ ಕೆಲಸವನ್ನು ನಾವು ನಿರಂತರ ಮಾಡುತ್ತೇವೆ. ಯುವಕ, ಯುವತಿರು ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಒಳ್ಳೆಯ ಹೆಸರು ತರಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಜಾನನ ಸುಂಡಕರ, ರಾಯಪ್ಪ ಅರಕನ್ನವರ, ಸಿದ್ದಪ್ಪ ಸುಳ್ಳನವರ, ಮಹಾದೇವಪ್ಪ ಪತ್ತಾರ, ಸಿದ್ದಪ್ಪ ಹಂಜಿ, ಪಾಂಡು ರಂಗಸುಬೆ, ದಯಾನಂದ ಪಾಟೀಲ, ತಪಶಿ, ಮೆಳವಂಕಿ, ದಡ್ಡಿ ಗ್ರಾಮದ ಮುಖಂಡರು ಸೇರಿದಂತೆ ಇತರರು ಇದ್ದರು.




