ಕೋವಿಡ್ ಭಯ: ಸುರತ್ಕಲ್ನಲ್ಲಿ ಪೊಲೀಸ್ ಆಯುಕ್ತರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಮಂಗಳೂರು: ಕೋವಿಡ್ ಸೋಂಕು ತಗುಲಿದೆ ಎಂದು ಭಯಪಟ್ಟ ದಂಪತಿ ಡೆತ್ ನೋಟ್ ಬರೆದು, ಪೊಲೀಸ್ ಕಮೀಷನರ್ ಗೆ ಫೋನ್ ನಲ್ಲಿ ತಿಳಿಸಿ, ಕೆಲವೇ ನಿಮಿಷಗಳಲ್ಲಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿ ನಡೆದಿದೆ.
ಆರ್ಯ ಸುವರ್ಣ ಹಾಗೂ ಪತ್ನಿ ಗುಣ ಸುವರ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಯ ಸುವರ್ಣ ಪೊಲೀಸ್ ಆಯುಕ್ತರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದಾಗ, ತಕ್ಷಣ ಪ್ರತಿಕ್ರಿಯಿಸಿರುವ ಪೊಲೀಸ್ ಕಮೀಷನರ್ ದುಡುಕಿನ ನಿರ್ಧಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಕೂಡಲೇ ಮೀಡಿಯಾ ಗ್ರೂಪ್ನಲ್ಲಿ ಆರ್ಯ ಸುವರ್ಣ ಎಂಬುವವರನ್ನು ಪತ್ತೆ ಮಾಡುವಂತೆ, ಮತ್ತು ರಕ್ಷಣೆ ಮಾಡುವಂತೆ, ಬೈಕಂಪಾಡಿ ಏರಿಯಾದಲ್ಲಿ ಯಾರಾದರೂ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಇಪ್ಪತ್ತು ನಿಮಿಷಗಳಲ್ಲಿ ಪೊಲೀಸರ ತಂಡ ಬೈಕಂಪಾಡಿಯ ಅಪಾರ್ಟ್ಮೆಂಟ್ ತಲುಪಿದಾಗ, ಅಲ್ಲಿ ದಂಪತಿಗಳಿಬ್ಬರೂ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಪೊಲೀಸರು ಪರಿಶೀಲಿಸಿದಾಗ ಗುಣ ಸುವರ್ಣ ಬರೆದಿರುವ ಡೆತ್ನೋಟ್ ಸಿಕ್ಕಿದೆ. ತನಗೆ ಸಕ್ಕರೆ ಕಾಯಿಲೆಯಿದ್ದು ಎಷ್ಟೇ ಔಷಧಿ ತೆಗೆದುಕೊಂಡರೂ ನಿಯಂತ್ರಣವಾಗುತ್ತಿಲ್ಲ. ನಮಗೆ ಮಕ್ಕಳಿಲ್ಲ. ಎರಡು ಬಾರಿ ಗರ್ಭಿಣಿಯಾಗಿ ತೊಂದರೆಯಾಗಿತ್ತು. ಒಂದು ಮಗು ಜನಿಸಿ 13 ದಿನಗಳಲ್ಲಿ ಮೃತಪಟ್ಟಿದೆ. ಕಳೆದ 2000ರಲ್ಲಿ ವಿವಾಹವಾಗಿದ್ದು, ನೋವಿನಿಂದಲೇ ಬಾಳಿದ್ದೇವೆ. ಕಳೆದೊಂದು ವಾರದಿಂದ ನನಗೆ ಮತ್ತು ನನ್ನ ಪತಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದಿದೆ. ಕೋವಿಡ್ ಸೋಂಕಿತರ ಸುದ್ದಿಗಳನ್ನು ನೋಡಿ ಭಯಪಟ್ಟಿರುವ ನಾವು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಮನೆಯೊಳಗಿರುವ ವಸ್ತುಗಳನ್ನು ಬಡವರಿಗೆ ಹಂಚಿರಿ ಎಂದು ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
