
ಎಂ ಹೈದರ್
ದೇಶದ 75ನೇ ಸ್ವಾತಂತ್ರೊತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ (ಗತಿ ಶಕ್ತಿ) ಮೂಲ ಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಒಂದು ಲಕ್ಷ ಕೋಟಿ ಘೋಷಣೆ ಮಾಡಿದ್ದಾರೆ.
ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಮಾಡಿದ ಎಂಟನೇ ಭಾಷಣ ಇದಾಗಿದ್ದು ಈ ಎಂಟು ಬಾರಿಯೂ ಅವರು ತೊಟ್ಟ ಕುರ್ತಾ ಪೈಜಾಮುಗಳಲ್ಲಿ ಹಲವಾರು ಬಣ್ಣಗಳನ್ನು ಕಾಣಬಹುದು. ಪ್ರತಿ ಬಾರಿಯೂ ಹೊಸ ಹೊಸ ವಿನ್ಯಾಸದ ದಿರಿಸು ಧರಿಸಿ ಠೀಕು ಠಾಕಾಗಿ ಸಿದ್ದರಾಗಿ ಬಂದು ಕೆಂಪುಕೋಟೆಯಲ್ಲಿ ಭಾಷಣ ಮಾಡಿದ್ದಾರೆ. ಆದರೆ ಅವರ ಘೋಷಣೆಗಳಲ್ಲಿ ಮಾತ್ರ ಬದಲಾವಣೆ ಆಗಿಲ್ಲ 2019ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿಯೂ ಅವರು ಒಂದು ಲಕ್ಷ ಕೋಟಿ ಹಣವನ್ನು ಆಧುನಿಕ ಇನ್ಪ್ರಾಸ್ಟ್ರಕ್ಚರ್ ಗೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆ ಘೋಷಣೆ ಕಾರ್ಯರೂಪಕ್ಕೆ ಬಂದದ್ದು ಕಣ್ಣಿಗಂತೂ ಕಾಣುತ್ತಿಲ್ಲ. ಅದರ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ ಎಷ್ಟು ಅದ್ಭುತ ಅಲ್ಲವೇ?
2019ರ ನಂತರ ಎರಡು ವರ್ಷಗಳ ಬಳಿಕ ಪ್ರಧಾನಿ ಮೋದಿಯವರು ಅದೇ ಕೆಂಪುಕೋಟೆಯಿಂದ 75 ನೇ ಸ್ವಾತಂತ್ರೊತ್ಸವದ ಭಾಷಣದಲ್ಲಿ ಮತ್ತೆ ಒಂದು ಲಕ್ಷ ಕೋಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಇದು ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯಕ್ಕೆ ಎಂದು ಹೇಳಿದ್ದಾರೆ ಅದು ಯಾವ ರೀತಿಯಾಗಿ ಕಾರ್ಯರೂಪಕ್ಕೆ ಬಂದು ದೇಶ ಅಭಿವೃದ್ಧಿ ಹೊಂದಲಿದೆ ಎಂಬುದನ್ನು ಮುಂದಿನ ಘೋಷಣೆವರೆಗೂ ಕಾದು ನೋಡಬೇಕಿದೆ.
ಕೆಂಪುಕೋಟೆಯಿಂದ ಈ ಹಿಂದಿನ ಪ್ರಧಾನಿಗಳಿಗಿಂತ ಹೆಚ್ಚು ಸಮಯ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ಅವರು ಮಾಡಿದ ಭಾಷಣ ಅನುಷ್ಠಾನಕ್ಕೆ ಬಂದಿದ್ದರೆ ಭಾರತಕ್ಕೆ ಸ್ವರ್ಗವೇ ಧರೆಗಿಳಿದಂತೆ ಅಭಿವೃದ್ಧಿ ಕಾಣಬೇಕಿತ್ತು. ಆದರೆ ಅದಕ್ಕೆ ಬದಲಾಗಿ ಕಳೆದ ಏಳು ವರ್ಷಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಜನರ ಜೀವನ ಮಟ್ಟ ಕುಸಿದಿದೆ. ಬಡತನ ಹೆಚ್ಚಾಗಿದೆ. ಅಭಿವೃದ್ಧಿ ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗಿದೆ.
ಅದರೆ ಈ ಬಾರಿಯ ಭಾಷಣದಲ್ಲಿ ಪ್ರಧಾನಿಯವರು ಇನ್ನೊಂದು ವಿಚಾರ ಪ್ರಸ್ತಾಪಿಸಿದ್ದಾರೆ. ಅದು 1947ರಲ್ಲಿ ದೇಶ ವಿಭಜನೆಯಾದಾಗ ಸಾವಿರಾರು ಜನ ಸಾವಿಗೀಡಾದರು, ಹಿಂಸೆಗೊಳಗಾದರು ಎಂದು. 1947ರಲ್ಲಿ ದೊಡ್ಡ ಕೋಮು ಸಂಘರ್ಷ ನಡೆದಿರುವ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ ಹೌದು, ಆದರೆ ಹಳೆಯ ಗಾಯವನ್ನು ಮತ್ತೆ ಕೆರೆದು ಹುಣ್ಣು ಮಾಡಿಕೊಳ್ಳುವ ಅಗತ್ಯ ಈಗ ಏನಿದೆ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತಿದೆ. ಆದರೆ ತನ್ನ ವೈಫಲ್ಯಗಳನ್ನು ಮರೆಮಾಚಲು ಇಂತಹ ವಿಷಯಗಳನ್ನು ಕೆದಕುವುದು ಮುಂದಿನ ಉತ್ತರ ಪ್ರದೇಶ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ನಡೆಯಲಿರುವ ಚುನಾವಣೆಗಾಗಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಅನಿವಾರ್ಯತೆ ಮತ್ತೆ ಬಿಜೆಪಿಗೆ ಬಿದ್ದಿರಬಹುದು.
ಆದರೆ ಜನ ವಾಸ್ತವ ಪರಿಸ್ಥಿತಿಯಲ್ಲಿ ಗಮನಕ್ಕೇರಿದ ಅಗತ್ಯ ವಸ್ತುಗಳ ಬೆಲೆಗಳಿಂದ ನಿರುದ್ಯೋಗದಿಂದ ಹೆಚ್ಚಾದ ಬಡತನದಿಂದ ದೇಶ ಚೇತರಿಸಿಕೊಳ್ಳುವುದನ್ನು ಬಯಸಿದ್ದಾರೆ.



