ನಾಲೆ ಒಡೆದು ಜಮೀನಿಗೆ ನುಗ್ಗಿದ ನೀರು; ಲಕ್ಷಾಂತರ ರೂ. ನಷ್ಟ

ಮಂಡ್ಯ : ಕೆ.ಆರ್.ಪೇಟೆ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯಿಂದಾಗಿ ಮಂದಗೆರೆ ಎಡದಂಡ ನಾಲೆ ಒಡೆದು ಲಕ್ಷಾಂತರ ನಷ್ಟ ಸಂಭವಿಸಿದೆ. ಬೆಳೆದು ನಿಂತಿದ್ದ ಕೃಷಿ ಭೂಮಿಗೆ ನುಗ್ಗುತ್ತಿರುವ ನಾಲೆಯ ನೀರಿನಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಬೆಳೆ ನಷ್ಠವಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಪಿ.ಡಿ.ಜಿ ಕೊಪ್ಪಲು ಗ್ರಾಮದ ವಿಠಲಾಪುರ ಗ್ರಾಮದ ಸಮೀಪದಲ್ಲಿಯೇ ನಾಲೆ ಒಡೆದಿದ್ದು ಇದಕ್ಕೆ ಇಲಾಖೆಯ ಎಂಜಿನಿಯರ್ ಹೊಳ್ಳೆತ್ತುವಲ್ಲಿ ಮಾಡಿರುವ ಅಕ್ರಮವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಲೆಯ ನೀರು ಗ್ರಾಮಕ್ಕೆ ನುಗ್ಗಿರುವುದರಿಂದ ರಸ್ತೆಯಲ್ಲಿ ನೀರು ನಿಲ್ಲುವ ಜೊತೆಗೆ ಗ್ರಾಮದ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ವಿದ್ಯುತ್ ಲೈನಿನಲ್ಲಿ ವಿದ್ಯುತ್ ಹರಿಯುವುದು ನಿಂತಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ.
ಕೆ.ಆರ್.ಪೇಟೆಯ ನಂ.20 ಉಪವಿಭಾಗದ ಕಾವೇರಿ ನೀರಾವರಿ ನಿಗಮದ ಎಂಜಿನಿಯರುಗಳು ಎಇಇ ರಂಗಸ್ವಾಮಿ ಅವರ ನೇತೃತ್ವದಲ್ಲಿ ನಾಲೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಿದ್ದು ಸಹಾಯಕ ಎಂಜಿನಿಯರುಗಳಾದ ಎಲೆಕೆರೆ ರವಿ ಮತ್ತು ರವಿಕುಮಾರ್ ಪಿಡಿಜಿ ಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




