ಆಹಾರಕೊಡಗು

ಕೊಡಗಿನಲ್ಲಿ ‘ಆಟಿ’ ಹಬ್ಬ; ಪ್ರತಿ ಮನೆಯಲ್ಲಿ 18 ಔಷಧೀಯ ಗುಣದ ಆಟಿ ಸೊಪ್ಪಿನ ಸಿಹಿಯೂಟ

ಕೊಡಗು: ಇದೀಗ ಆಟಿ 18ರ ಸಂಭ್ರಮ. ಕರ್ಕಾಟಕ ಮಾಸದ ಮಳೆ ಬರದಿದ್ದರೂ ಪ್ರತೀ ಮನೆಯಲ್ಲೂ ಕಕ್ಕಡ ಪಾಯಸ ತಯಾರಿಯಾಗುತ್ತದೆ, ಪ್ರತಿ ಮನೆಯಲ್ಲೂ 18 ವಿಶಿಷ್ಟ ಔಷಧ ಗುಣವುಳ್ಳ ಆಟಿ ಸೊಪ್ಪಿನ ಸಿಹಿ ಖಾದ್ಯಗಳನ್ನು ಮಾಡಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಆಟಿ ಪಾಯಸದ್ದೇ ಪರಿಮಳ!
ಆಟಿ (ಮದ್ದು) ಸೊಪ್ಪು ಎಂದು ಕರೆಯಲ್ಪಡುವ ಔಷಧೀಯ ಗಿಡದ ರಸದಿಂದ ತಯಾರಿಸಿದ ಪಾಯಸ ಇಂದು ಮನೆ ಮನೆಯಲ್ಲೂ ಘಮಘಮಿಸಿದೆ.
ಜಿಲ್ಲೆಯಲ್ಲಿ ಈ ಪಾಯಸಕ್ಕೆ ಕಕ್ಕಡ ಪದಿನೆಟ್ಟ್ ಪಾಯಸ ಎಂದು ಕರೆಯುತ್ತಾರೆ. ಕಕ್ಕಡ ಎಂದರೇ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ದಟ್ಟಾರಣ್ಯದಿಂದ ಕೂಡಿರುವ ಕೊಡಗಿನಲ್ಲಿ ಸಾಕಷ್ಟು ಔಷಧಿಯ ಗುಣಗಳುಳ್ಳ ಸಸ್ಯ ಪ್ರಭೇದಗಳಿವೆ. ಅವುಗಳಲ್ಲಿ ಆಟಿ ಸೊಪ್ಪು ಪ್ರಮುಖವಾದುದ್ದು. ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ ಕಾಫಿ ತೋಟದಲ್ಲೂ ಹೇರಳವಾಗಿ ಕಾಣಸಿಗುತ್ತದೆ.

ಮೂರಡಿಯಷ್ಟು ಎತ್ತರ ಬೆಳೆಯುವ ಈ ಗಿಡಕ್ಕೆ ಆಟಿ ತಿಂಗಳ ಮೊದಲ ದಿನದಿಂದ ನಾನಾ ಔಷಧೀಯ ಗುಣಗಳು ಸೇರುತ್ತವೆ ಎಂಬ ನಂಬಿಕೆ ಇದೆ. 18ದಿನಗಳ ಕಾಲ ದಿನಕ್ಕೊಂದು ಔಷಧ ಗುಣ ಸೇರಿ 18ನೇ ದಿನ ಪರಿಮಳ ಬೀರುತ್ತದೆ. ಅಂದು ಆ ಗಿಡವನ್ನು ಬೇಯಿಸಿ ರಸ ತೆಗೆಯುತ್ತಾರೆ. ಕೆಂಬಣ್ಣದ ಈ ರಸದಲ್ಲಿ ಪಾಯಸ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ.

ಪ್ರಮುಖವಾಗಿ ಈ ಗಿಡದ ರಸದಿಂದ ಪಾಯಸ ತಯಾರಿಸುತ್ತಾರೆ. ಅಕ್ಕಿಯಿಂದ ತಯಾರಿಸುವ ಪಾಯಸಕ್ಕೆ ಈ ರಸ ಬೆರೆಸುತ್ತಾರೆ. ಸಿದ್ಧವಾದ ಪಾಯಸಕ್ಕೆ ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ ತಿನ್ನುತ್ತಾರೆ. ಈ ಪಾಯಸ ಸೇವಿಸಿದ ಬಳಿಕ ಮೂತ್ರ ಕೂಡ ಕೆಂಬಣ್ಣಕ್ಕೆ ತಿರುಗುತ್ತದೆ. ಅದು ಎಷ್ಟು ಕೆಂಪಾಗಿರುತ್ತದೋ ಅಷ್ಟು ಔಷಧೀಯ ಗುಣ ಗಿಡಕ್ಕೆ ಸೇರಿದೆ ಎಂದು ಅರ್ಥ.

ಸಾಮಾನ್ಯವಾಗಿ ಆಟಿ ಸೊಪ್ಪಿನ ರಸದಿಂದ ಕೊಡಗಿನಲ್ಲಿ ಪಾಯಸ ಮಾಡುತ್ತಾರೆ. ಆದರೆ ಇತ್ತಿಚೇಗೆ ಅದರಿಂದ ಹಲ್ವ, ಇಡ್ಲಿ, ತಟ್ಟೆ ಇಡ್ಲಿ ಮುಂತಾದ ಖಾದ್ಯವನ್ನೂ ತಯಾರಿಸುತ್ತಾರೆ. ಕೆಲವರು ಅನ್ನವನ್ನು ಕೂಡ ಈ ರಸದಿಂದ ಮಾಡುತ್ತಾರೆ. ರಸವನ್ನು ಜ್ಯೂಸ್ ರೀತಿಯಲ್ಲೂ ಸೇವಿಸುತ್ತಾರೆ. ಅಷ್ಟಕ್ಕೂ ಈ ರಸ ಸಿಹಿಯಾಗಿ ಇರುವುದಿಲ್ಲ. ಹಾಗಾಗಿ ಬಿಳಿ ಬೆಲ್ಲ ಸಕ್ಕರೆ ಸೇರಿಸಿ ಸವಿಯುತ್ತಾರೆ.

ಪಾಯಸ ಸೇವಿಸಿದ ಮಾರನೇ ದಿನ ಆಟಿ ಕೋಳಿ ಭಕ್ಷ್ಯ ಮಾಡುತ್ತಾರೆ. ಸಾಮಾನ್ಯವಾಗಿ ನಾಟಿ ಕೋಳಿಯನ್ನೇ ಬಳಸಲಾಗುತ್ತಿದ್ದರೂ ಪಟ್ಟಣ ಪ್ರದೇಶದಲ್ಲಿ ಅವು ಸಿಗುವುದು ಕಡಿಮೆಯಾದ ಹಿನ್ನಲೆಯಲ್ಲಿ ಫಾರಂ ಕೋಳಿಯನ್ನೇ ಬಳಸುತ್ತಾರೆ. ನಾಟಿ ಕೋಳಿ ಕೂಡ ಔಷಧ ಗುಣಗಳುಳ್ಳ ಆಹಾರ ತಿಂದಿರುವುದರಿಂದ ಕೋಳಿ ಮಾಂಸದಲ್ಲೂ ಔಷಧ ಗುಣ ಸೇರಿರುತ್ತದೆ ಎಂಬ ನಂಬಿಕೆಯಿದೆ. ಜತೆಗೆ ಏಡಿ ಕೂಡ ಆಟಿ ಹಬ್ಬದ ಪ್ರಮುಖ ಖಾದ್ಯ. ಇದರೊಂದಿಗೆ ಗದ್ದೆಯಲ್ಲಿ ಬೆಳೆದ ಅಣಬೆಯನ್ನು ಕೂಡ ಇದೇ ಸಮಯದಲ್ಲಿ ಸೇವಿಸಲಾಗುತ್ತದೆ.

ಆಟಿ ಸೊಪ್ಪು ರಸ ಸೇವಿಸಲು ಕಾರಣವಿದೆ. ಕೊಡಗಿನಲ್ಲಿ ಆಟಿ ತಿಂಗಳಲ್ಲಿ ಮಳೆ ಸುರಿಯುವುದರಿಂದ ಜನರು ಹೆಚ್ಚು ಶೀತಕ್ಕೊಳಗಾಗಿರುತ್ತಾರೆ. ಜತೆಗೆ ಎರಡು ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹೀಗಾಗಿ ಈ ಸೊಪ್ಪಿನ ರಸ ಸೇವಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂಬ ವಿಶ್ವಾಸವಿದೆ.

ಕೊಡಗಿನಲ್ಲಿ ಆಟಿ ಪಾಯಸ ಸೇವಿಸುವಾಗ ಮಳೆ ಧೋ ಎಂದು ಸುರಿಯುತ್ತಿರುತ್ತದೆ. ಆದರೆ, ಈ ಬಾರಿ ವರುಣನ ಅವಕೃಪೆಯಿಂದ ಬಿರು ಬಿಸಿಲಿನಲ್ಲೇ ಪಾಯಸ ಸೇವಿಸುವಂತಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button