ಕೈಗಾ ಟೌನ್ ಶಿಪ್ ಬಳಿ ಜಲದಿಗ್ಬಂಧನ : ಸಂಕಷ್ಟಕ್ಕೆ ಸಿಲುಕಿದ ಜನರು

ಕಾರವಾರ : ಕದ್ರಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಹೋಟೆಲ್ ಜಲಾವೃತಗೊಂಡು ಕಳೆದ ಎರಡು ದಿನದಿಂದ 50 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಹಾಗೂ ಹೋಟೆಲ್ ಸಿಬ್ಬಂದಿ ಜಲದಿಗ್ಬಂಧನಕ್ಕೊಳಗಾಗಿರುವ ಘಟನೆ ಕಾರವಾರದ ಮಲ್ಲಾಪುರದಲ್ಲಿ ನಡೆದಿದೆ.
ಮಲ್ಲಾಪುರದ ಕೈಗಾ ಟೌನ್ ಶಿಪ್ ಬಳಿಯ ಸುಭದ್ರಾ ಹೋಟೆಲ್ನಲ್ಲಿ ಎನ್ಪಿಸಿಐಎಲ್ ಕೈಗಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ಪವರ್ ಪ್ಲ್ಯಾಂಟ್ ನಿರ್ವಹಣಾ ಕೆಲಸಕ್ಕೆ ಆಗಮಿಸಿದ ಸುಮಾರು 50 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಗುರುವಾರ ರಾತ್ರಿ ಹೋಟೆಲ್ನಲ್ಲಿ ತಂಗಿದ್ದರು.
ಆದರೆ ಕದ್ರಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಸುಭದ್ರಾ ಹೋಟೆಲ್ ಸಂಪೂರ್ಣ ಜಲಾವೃತಗೊಂಡು ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.ನೀರು ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ನೀರು ಏರುತ್ತಿರುವುದರಿಂದ ಆತಂಕಗೊಂಡು ಈ ಬಗ್ಗೆ ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಪ್ರವಾಹ ಪರಿಸ್ಥಿತಿ ಹೆಚ್ಚಾದ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ಕಾರ್ಯಾಚರಣೆ ನಡೆಸಲಾಗದೆ ಹೋಟೆಲ್ ನಲ್ಲಿರುವ ಕಾರ್ಮಿಕರ ಸುರಕ್ಷತೆ ಬಗ್ಗೆ ತಿಳಿದುಕೊಂಡು ಅಲ್ಲಿಯೇ ಇರುವಂತೆ ಸೂಚಿಸಿದ್ದಾರೆ.
ಸದ್ಯ ಹೊಟೇಲ್ ನ 4 ನೇ ಮಹಡಿಯಲ್ಲಿ 50 ಮಂದಿಯೂ ಸುರಕ್ಷಿತವಾಗಿದ್ದು, ಹೋಟೆಲ್ ಸಿಬ್ಬಂದಿಯೇ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ರಾತ್ರಿ ಕಾರ್ಯಾಚರಣೆ ಸಾಧ್ಯವಿಲ್ಲದ ಕಾರಣ ಮತ್ತು ಸದ್ಯ ಕಾರ್ಮಿಕರು ಸುರಕ್ಷಿತವಾಗಿರುವ ಕಾರಣ ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ಮೂಲಕ ಎಲ್ಲರನ್ನು ಕರೆತರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ಕರ್ನಾಟಕ ಪ್ರಾಂತ್ಯದ ಐಸಿಜಿ ( ಭಾರತೀಯ ಕೋಸ್ಟ್ ಗಾರ್ಡ್) ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಇಡೀ ದಿನ ರಕ್ಷಣಾ ಕಾರ್ಯಾಚರಣೆ ನಡೆಸಿ ಖಾರ್ಗೆಜೂಗ್ ಗ್ರಾಮ, ಉಂಗ್ಲಿಜೂಗ್, ಖರೆಜೂಗ್ ಮತ್ತು ಬೊಡೋಜೂಗ್ ದ್ವೀಪಗಳಿಂದ ಒಟ್ಟು 161 ಜನರನ್ನು ರಕ್ಷಿಸಲಾಗಿದೆ.
ನಿರಂತರ ಭಾರೀ ಮಳೆಯ ಪರಿಣಾಮದಿಂದ ಜನರ ರಕ್ಷಣೆಗೆ ಮತ್ತು ನಾಗರಿಕರಿಗೆ ಸಹಾಯ ಮಾಡಲು ಐಸಿಜಿ ಪಡೆ ಸಿದ್ಧವಾಗಿದೆ ಎಂದು ರಕ್ಷಣಾ ವಿಭಾಗ ಹೇಳಿದೆ.
