ಮಧ್ಯಪ್ರದೇಶದ ಅಸ್ವಸ್ಥ ವ್ಯಕ್ತಿಗೆ ಆರೈಕೆ ಮಾಡಿ ಕಳುಹಿಸಿದ ಸ್ಥಳೀಯರು

ಚಿಕ್ಕಮಗಳೂರು: ಅಂಗಡಿ ಮಳಿಗೆಗಳ ಕಟ್ಟಡವೊಂದರ ಆವರಣದಲ್ಲಿ ಮಲಗಿಕೊಂಡಿದ್ದ, ದಿಕ್ಕು ದೆಸೆಯಿಲ್ಲದ, ಸ್ವಚ್ಛತೆಯಿಲ್ಲದೆ ಅಸ್ವಸ್ಥ ವೃದ್ಧ ವ್ಯಕ್ತಿಯೋರ್ವರನ್ನು ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರು ಆರೈಕೆ ಮಾಡಿ ತನ್ನ ಊರಿಗೆ ತೆರಳಲು ಸಹಾಯ ಮಾಡಿರುವ ಮಾನವೀಯ ಘಟನೆ ಕೊಟ್ಟಿಗೆಹಾರದಲ್ಲಿ ವರದಿಯಾಗಿದೆ.
ಸ್ಥಳೀಯರಾದ ಆರಿಫ್, ಮಹೇಶ್ ಎಂಬುವವರು ಸೇರಿ ಅಸ್ವಸ್ಥ ವೃದ್ಧನಿಗೆ ಕಟಿಂಗ್ ಮತ್ತು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಆರೈಕೆ ಮಾಡಿ ಬೆಂಗಳೂರು ಬಸ್ ಏರಿಸಿ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಮಧ್ಯಪ್ರದೇಶದ ಮೂಲದ ವ್ಯಕ್ತಿಯೆಂದು ತಿಳಿದುಬಂದಿದೆ. ಸ್ನಾನ ಮಾಡದೆ, ಗಡ್ಡ ಬೆಳೆಸಿಕೊಂಡು ವಿಚಿತ್ರವಾಗಿದ್ದ. ಆರೈಕೆ ಮಾಡಿದ ನಂತರ ಆತನನ್ನು ಆಂಧ್ರಕ್ಕೆ ವಾಪಸ್ ಕಳುಹಿಸಲು ಬೆಂಗಳೂರು ಬಸ್ ಮೂಲಕ ಕಳುಹಿಸಲಾಯಿತು. ಬೆಂಗಳೂರು ಬಸ್ ನಿಲ್ದಾಣ ತಲುಪಿದ ಮೇಲೆ ಆಂಧ್ರಕ್ಕೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಆಟೋ ವ್ಯವಸ್ಥೆಗೆ ಸಹಾಯ ಮಾಡುವಂತೆ ಬಸ್ ನಿರ್ವಾಹಕರಿಗೆ ಕೋರಲಾಯಿತು ಎಂದು ಸ್ಥಳೀಯರಾದ ಸಂತೋಷ್ ಅತ್ತಿಗೆರೆ ತಿಳಿಸಿದ್ದಾರೆ.




