
ವರದಿ: ಎಂ ಹೈದರ್
ಲಕ್ನೋ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ AIMIM ನ ಅಸಾದುದ್ದಿನ್ ಓವೈಸಿ ಅವರ ಪರೋಕ್ಷ ಸಹಕಾರದಿಂದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ನಾನು ಉತ್ತರ ಪ್ರದೇಶವನ್ನು ತ್ಯಜಿಸುವುದಾಗಿ ಖ್ಯಾತ ಕವಿ ಮುನವ್ವರ್ ರಾಣಾ ಅವರು ಹೇಳಿದ್ದಾರೆ.
ಅಸಾದುದ್ದೀನ್ ಓವೈಸಿಯನ್ನು ‘ಬಿಜೆಪಿಯ ಲೈಲಾ’ ಎಂದಿರುವ ಅವರು ಕೊರೊನಾ ಮಹಾಮಾರಿಯ ನಂತರ ಹಿಂದು ಮತ್ತು ಮುಸ್ಲಿಮರು ಒಂದಾಗಿ ಸುಖ ದುಃಖ ಹಂಚಿಕೊಂಡು ಬದುಕುವಂತಹ ವಾತಾವರಣ ನಿರ್ಮಾಣವಾಗುತ್ತಿರುವ ಸುಂದರ ಮುನ್ಸೂಚನೆಯನ್ನು ಸಹಿಸದವರು ಓವೈಸಿಯನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಎಂದಿದ್ದಾರೆ.
ಅಸಾದುದ್ದಿನ್ ಓವೈಸಿಯು ಪ್ರತಿ ಬಾರಿಯೂ ಬಿಜೆಪಿಗಾಗಿ ಕೆಲಸ ಮಾಡುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ಪಕ್ಷವು ಅವರನ್ನು ಬಳಸಿಕೊಳ್ಳುತ್ತದೆ. ಕೇಂದ್ರ ಸರ್ಕಾರದ ಕಡೆಯಿಂದ ಯಾವುದಾದರೂ ತನಿಖಾ ಸಂಸ್ಥೆ ಹೈದರಾಬಾದ್ ಕಡೆಗೆ ಹೋಗಿದ್ದನ್ನು ನೀವು ನೋಡಿದ್ದೀರಾ ಎಂದು ಪ್ರಶ್ನಿಸಿರುವ ಅವರು,
ಹಿಂದೂಗಳು ಮತ್ತು ತೊಂದರೆಗೊಳಗಾಗಿರುವ ಮುಸ್ಲಿಮರನ್ನು ಹೆದರಿಸುವ ಮೂಲಕ ಆದಿತ್ಯನಾಥ್ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ರಾಣಾ ಕಿಡಿ ಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಎಟಿಎಸ್ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರಲ್ಲ, ಪ್ರೆಷರ್ ಕುಕ್ಕರ್ ಸಿಕ್ಕಿದೆ. ನಾನು ಕೂಡ ನಾಲ್ಕೈದು ದಿನಗಳ ಹಿಂದೆ ಪ್ರೆಷರ್ ಕುಕ್ಕರ್ ಖರೀದಿಸಿದ್ದೆ ಈಗ ನಾನು ಅದನ್ನು ಅಂಗಡಿಯವನಿಗೆ ವಾಪಸ್ಸು ಕೊಟ್ಟು ಬಂದೆ, ಯಾರಿಗೆ ಗೊತ್ತು, ಅದರಲ್ಲಿ ಬಾಂಬ್ ಸ್ಫೋಟವಾದರೆ ಏನು ಮಾಡೋಣ? ಎಂದು ಕವಿ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ಕಾನೂನಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಣ ಅವರು, ಜನ ಯಾಕೆ ಹೆಚ್ಚು ಮಕ್ಕಳನ್ನು ಮಾಡುತ್ತಾರೆ ಎಂದರೆ, ಇಬ್ಬರು ಎನ್ಕೌಂಟರ್ ನಲ್ಲಿ ಸಾಯಲು, ಒಬ್ಬರು ಕೊರೊನಾ ಕೊಲ್ಲಲು, ಇನ್ನಿಬ್ಬರು ಅಪಘಾತದಲ್ಲಿ ಸಾಯಲು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹಿಂದುಗಳು ಮತ್ತು ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಯಾಕೆಂದರೆ ಇಷ್ಟೆಲ್ಲಾ ಆದ ಮೇಲೆ ಕೊನೆಗೆ ಒಬ್ಬರಾದರೂ ಮನೆಗೆ ಇರಲಿ ಎಂದುಕೊಂಡು ಎಂದು ಮುನವ್ವರ್ ರಾಣಾ ಅವರು ಪ್ರಸ್ತುತ ಪರಿಸ್ಥಿತಿ ಬಗ್ಗೆ ತೀಕ್ಷ್ಣವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



