ಸಿಎಂ ಬಿಎಸ್ವೈ ಬದಲಾವಣೆ ವಿಚಾರ – ಒಂದು ವಾರ ಕಾಯಿರಿ: ಡಿ ಕೆ ಶಿವಕುಮಾರ್

ಬಾಗಲಕೋಟೆ: ಸಿಎಂ ಬಿ ಎಸ್ ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಒಂದು ವಾರ ಕಾಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬನಹಟ್ಟಿಯಲ್ಲಿ ನೇಕಾರ ಸಮುದಾಯದೊಂದಿಗೆ ಸಂವಾದ ನಡೆಯಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಪಕ್ಷದ ಮೀಟಿಂಗ್ ಕರೆದಿದ್ದಾರಲ್ಲ. ಅಸೆಂಬ್ಲಿನೇ ಕರೆದಿಲ್ಲ, ಇದು ಉತ್ತರ ಕರ್ನಾಟಕದ ನಿರ್ಲಕ್ಷ್ಯ ಕಾಣುತ್ತಿದೆ ಎಂದು ತಿಳಿಸಿದರು.
ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ಕರೆದಿಲ್ಲ. ಸುವರ್ಣ ಸೌಧದಲ್ಲಿ ಸೀಟು, ಚೇರ್ ಗಳನ್ನು ಹೆಗ್ಗಣಗಳು ತಿನ್ನುತ್ತಿವೆ. ಸುವರ್ಣಸೌಧದಲ್ಲಿ ಅಸೆಂಬ್ಲಿ ಕರೆಯುವುದು ಬಿಟ್ಟು ಮಿಚ್ಚಿಕೊಂಡು ಕಳಿತಿದ್ದಾರೆ. ಇದು ಅವರ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗೊತ್ತಾಗುತ್ತೆ. ಅಲ್ಲಿ ಅಧಿವೇಶನ ನಡೆಸದಿದ್ದರೆ ಅದನ್ನು ಬಾಡಿಗೆಯಾದರೂ ಕೊಡಲಿ.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲಾಗಿದೆ ಎಂದರು.
ಸಿದ್ದು, ಡಿಕೆಶಿ ಹೈಕಮಾಂಡ್ ದೆಹಲಿಗೆ ಬುಲಾವ್ ವಿಚಾರಕ್ಕೆ ನಮ್ಮ ಪಾರ್ಟಿ ಮೀಟಿಂಗ್ ಇದೆ. ಎಲ್ಲ ರಾಜ್ಯದ ಅಧ್ಯಕ್ಷ, ಸಿಎಲ್ಪಿ ನಾಯಕರನ್ನು ಪಕ್ಷದ ಮುಂದಿನ ನಿರ್ಧಾರದ ಬಗ್ಗೆ ಚರ್ಚೆಗೆ ಕರೆದಿದ್ದಾರೆ. ನಾನು ಕಳೆದ ತಿಂಗಳು ದೆಹಲಿಗೆ ಹೋಗಿದ್ದೆ. ಕೆಲವು ಟೈಂ ಪಾರ್ಲಿಮೆಂಟ್ ನಡೆಯುತ್ತಿರುತ್ತೆ. ನಮ್ಮ ಎಂಎಲ್, ಎಂಪಿ ಇರುತ್ತಾರೆ. ಹಾಗಾಗಿ ನಮ್ಮನ್ನು ಕರೆದು ಚರ್ಚೆ ಮಾಡ್ತಾರೆ. ಸುರ್ಜೆವಾಲ್ ಅವರು ನಮ್ಮ ರಾಜ್ಯದಲ್ಲಿ ಪರಾಭವಗೊಂಡ, ಪಕ್ಷದ ಪದಾಧಿಕಾರಿಗಳು ಭೇಟಿಯಾಗುವುದು ನಿಗದಿಯಾಗಿದೆ. ಮೊದಲು ಮಂಗಳೂರು, ಎರಡನೆಯದು ತುಮಕೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ವಿಭಾಗದಲ್ಲೂ ಭೇಟಿಯಾಗುತ್ತಾರೆ. ಸುರ್ಜೆವಾಲಾ ರಾಜ್ಯದ ಎಲ್ಲಾ ಡಿವಿಜನ್ ಗೆ ಭೇಟಿ ಕೊಡಲಿದ್ದಾರೆ. ಸಮಾವೇಶ, ಪಕ್ಷದ ಅಭ್ಯರ್ಥಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ಪಕ್ಷದ ಸಂಘಟನೆಗಾಗಿ ಕಾರ್ಯಕ್ರಮ ರೂಪಿಸ್ತಿದ್ದೇವೆ ಎಂದರು.
ಮದುವೆಗೆ ಮುಂಚೆ ಕಾಂಗ್ರೆಸ್ನವರು ಮಕ್ಕಳು ಮಾಡೋಕೆ ಹೊರಟಿದ್ದಾರೆಂಬ ಕಾರಜೋಳ ವ್ಯಂಗ್ಯದ ಹೇಳಿಕೆಗೆ. ಹೌದಾ, ಅವ್ರಿಗೂ ಗೊತ್ತಾಗಿದಿಯಾ ಮಗು ಆಗಿತ್ತೆ ಅಂತಾ? ಕಾರಜೋಳ ವ್ಯಂಗ್ಯ ಹೇಳಿಕೆಗೆ ಡಿಕೆಶಿ ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ಕೊಟ್ಟರು. ಮಗು ಆಗುತ್ತೆ ಅಂತಾ ಅವ್ರಿಗೂ ಗೊತ್ತಾಗಿದೆ ತಾನೆ?. ಅವ್ರಿಗೂ ಕಾಂಗ್ರೆಸ್ ಬರುತ್ತೆ ಅಂತಾ ಗೊತ್ತಾಗಿದೆ ತಾನೆ ಬಹಳ ಸಂತೋಷ.ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಯಡಿಯೂರಪ್ಪ ಅವರನ್ನು ಇಳಿಸೋದು, ಏಳಿಸೋದು ಕೂರಿಸೋದು ಅವರ ಪಾರ್ಟಿಗೆ ಬಿಟ್ಟಿದ್ದು, ಯಡಿಯೂರಪ್ಪ ವಿರುದ್ದ ಶಾಸಕರು ಭ್ರಷ್ಟಾಚಾರದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಶಾಸಕರು ಹೇಳುತ್ತಿರೋದು ಸರಿಯಲ್ಲ ಅಂತ ಹೈಕಮಾಂಡ್ ಹೇಳುತ್ತಿಲ್ಲ. ಹಾಗಿದ್ದರೆ ಅದು ನಿಜ ಇರಬೇಕಲ್ಲ. ಇಲ್ಲದಿದ್ರೆ ಶಾಸಕರು ಹೇಳೋದು ಸರಿ ಇಲ್ಲ ಅಂತ ಹೈಕಮಾಂಡ್ ಹೇಳಬಹುದಿತ್ತು, ಹೇಳುತ್ತಿಲ್ಲ ಎಂದರು.
