56 ಜನರ ಪ್ರಾಣ ರಕ್ಷಣೆಯಲ್ಲಿ ಸಾಹಸ; ಕಲಬುರ್ಗಿ ಯುವಕನಿಗೆ ಸಿಎಂ ಪದಕ

ಕಲಬುರಗಿ: ಧಾರವಾಡ ನಗರದಲ್ಲಿ ಕಟ್ಟಡ ಕುಸಿತವಾದಾಗ 56 ಜನರ ಪ್ರಾಣ ರಕ್ಷಣೆಯಲ್ಲಿ ತಮ್ಮದೇ ಆದ ಸಾಹಸ ಧೈರ್ಯ ತೊರಿದ ಅಗ್ನಿ ಶಾಮಕದಳದ ಸಿಬ್ಬಂದಿ ಯಲ್ಲಪ್ಪ ಪೂಜಾರಿ ಅವರಿಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪದಕ ಒಲಿದು ಬಂದಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದವರಾದ ಯಲ್ಲಪ್ಪ ಪೂಜಾರಿ ಕೃಷಿ ಕುಟುಂಬದಲ್ಲಿ ಜನಿಸಿ ಎಂಎ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಬಳ್ಳಾರಿಯ ಅಗ್ನಿ ಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ 2019ರಲ್ಲಿ ಧಾರವಾಡದ ಕರುಣೇಶ್ವರ ನಗರದ ಕಟ್ಟಡ ಕುಸಿದಿತ್ತು. ಕಟ್ಟಡದ ಅವಶೇಷಗಳಡಿ ಸಿಲುಕಿದ ಸುಮಾರು 56 ಜನರ ಪ್ರಾಣ ರಕ್ಷಣೆಯ ಕಾರ್ಯದಲ್ಲಿ ಯಲ್ಲಪ್ಪ ತಮ್ಮ ಎದೆಗಾರಿಕೆ ತೊರಿಸಿದ್ದರು. ಇವರ ಈ ಕಾರ್ಯ ಗುರುತಿಸಿ ಬಳ್ಳಾರಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರ ಎಸ್.ರವಿಪ್ರಸಾದ್ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಯಲ್ಲಪ್ಪ ಹೆಸರು ಶಿಫಾರಸ್ಸು ಮಾಡಿದರು.
ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿತರಣೆ ವಿಳಂಬವಾಗಿತ್ತು. ಮಂಗಳವಾರ ಬೆಂಗಳೂರಿನ ವಿಧಾನಸೌಧದ ಬ್ಯಾಕ್ವೇಂಟ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ಯಲ್ಲಪ್ಪ ಪೂಜಾರಿ ಸ್ವೀಕರಿಸಲಿದ್ದಾರೆ. ಯಲ್ಲಪ್ಪ ಈಗ ಕಲಬುರಗಿ ಅಗ್ನಿ ಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದ್ದಾರೆ.
