ಕೊರೊನಾ ಸಂಕಷ್ಟದ ಮಧ್ಯೆಯೇ ಬೆಳೆಗೆ ರೋಗಬಾಧೆ; ದಾಳಿಂಬೆ ತೋಟ ನಾಶಪಡಿಸಿದ ರೈತ

ಬೆಳಗಾವಿ: ಕೊರೋನಾ ಮಹಾಮಾರಿ ಹಾಗೂ ಹವಾಮಾನ ವೈಪರಿತ್ಯದಿಂದ ಅನ್ನದಾತನ ಸ್ಥಿತಿ ಚಿಂತಾಜನಕವಾಗಿದೆ. ಬೆಳೆದ ಬೆಳೆಗೆ ರೋಗಗಳ ಬಾಧೆ ಹಾಗೂ ಸರಿಯಾದ ಮಾರುಕಟ್ಟೆ ಸಿಗದ ಕಾರಣ ರೈತನ ಸಂಕಷ್ಟ ಹೇಳತಿರದ್ದಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ ಗ್ರಾಮದ ರೈತ ನವನಾಥ ಮಾನೆ ಎಂಬುವವರು ತಾವು ಬೆಳೆದ ಎರಡು ಎಕರೆ ದಾಳಿಂಬೆಯನ್ನು ನಾಶ ಪಡಿಸಿದ್ದಾರೆ. ಇದಕ್ಕೆ ಹವಾಮಾನ ವೈಪರಿತ್ಯ ಹಾಗೂ ಕೊರೊನಾ ಪ್ರಮುಖ ಕಾರಣವಾಗಿದೆ. ಹತೋಟಿಗೆ ಬಾರದ ರೋಗಕ್ಕೆ ತುತ್ತಾಗುವ ದಾಳಿಂಬೆ ಬೆಳೆ ಚುಕ್ಕಿ ರೋಗ, ಕ್ಯಾರ ರೋಗ, ಬೆಂಕಿ ರೋಗಗಳಂತಹ ರೋಗಬಾಧೆಯಿಂದ ನಷ್ಟ ಸಂಭವಿಸಿ ರೈತ ಬೆಳೆಯ ನಾಶಕ್ಕೆ ಕಾರಣವಾಗಿದೆ
ಎರಡು ಎಕರೆ ದಾಳಿಂಬೆ ಬೆಳೆಯಲು ಕನಿಷ್ಠ ಮೂರರಿಂದ ನಾಲ್ಕು ಲಕ್ಷ ರುಪಾಯಿ ಸಾಲ ಮಾಡಿದ ರೈತ ನವನಾಥ ಸತತ ಆರು ವರ್ಷಗಳಿಂದ ಗಿಡಗಳನ್ನು ಪೋಷಿಸಿ ಬೆಳೆಸಿ ಪಾಲನೆ ಮಾಡಿದ್ದಾರೆ ರೈತನಿಗೆ ಪ್ರತಿವರ್ಷವೂ ನಷ್ಟ ಸಂಭವಿಸಿದ ಕಾರಣದಿಂದ ದಾಳಿಂಬೆ ತೋಟವನ್ನು ನಾಶ ಮಾಡಿದ್ದಾರೆ. ಅಷ್ಟೋ ಇಷ್ಟು ಬೆಳೆದ ಫಸಲಿಗೆ ಸೂಕ್ತ ಬೆಲೆ ಇಲ್ಲದೆ ರೈತರನ್ನು ಸಂಕಷ್ಟಕ್ಕಿಡಾಗಿಸಿದೆ. ಆಜೂರ ಗ್ರಾಮದ ರೈತನಿಗೆ ದಾಳಿಂಬೆ ಫಸಲು ಕೈಗೆ ಬಂದಿರುವ ಸಂದರ್ಭದಲ್ಲಿ ಸೂಕ್ತ ಬೆಲೆ ಇಲ್ಲದೆ ಹಾಗೂ ರೋಗ ಬಾಧೆಯಿಂದ ಕಂಗಾಲಾಗಿ ರೈತ ವಿಧಿಯಿಲ್ಲದೆ ತೋಟವನ್ನು ನಾಶಪಡಿಸಿದ್ದಾರೆ.
ಅಥಣಿ ತಾಲೂಕಿನ ರೈತರ ಒಣಬೇಸಾಯ ಬೆಳೆ ಹೆಚ್ಚಾಗಿರುವುದರಿಂದ ದಾಳಿಂಬೆ ಬೆಳೆಗೆ ಆಕರ್ಷಕವಾದ ಬೆಲೆ ಇಲ್ಲವಾದರಿಂದ ನಷ್ಟ ಸಂಭವಿಸಿ ಮೈತುಂಬ ಸಾಲ ಮಾಡಿಕೊಂಡಿರುವವರು ಹೆಚ್ಚಾಗಿದ್ದಾರೆ. ಇನ್ನಾದರೂ ದಾಳಿಂಬೆ ಬೆಳೆದ ರೈತರಿಗೆ ಸರ್ಕಾರದಿಂದ ಪರಿಹಾರದ ಪ್ಯಾಕೇಜ್ ನೀಡುವಂತೆ ಈ ರೈತ ಆಗ್ರಹಿಸಿದ್ದಾನೆ.




