
ಮೈಸೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ಆಷಾಢ ಮಾಸದ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.
ಕೊರೊನಾ ಎರಡನೇ ಅಲೆಯಿಂದಾಗಿ ಇಷ್ಟು ದಿನ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ರಾಜ್ಯವನ್ನು ಹಂತ ಹಂತವಾಗಿ ಅನ್ಲಾಕ್ ಮಾಡುತ್ತಿದ್ದು, ಸೋಮವಾರದಿಂದ ದೇವಾಲಯಗಳನ್ನು ತರೆಯಲು ಅನುಮತಿ ನೀಡಿದೆ. ಸದ್ಯ ಭಕ್ತರು ಸೋಮವಾರದಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಈ ಮಧ್ಯೆ ಸಾಂಸ್ಕೃತಿಕನಗರಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಆಗಸ್ಟ್ ನಿಂದ ಆಷಾಢ ಮಾಸ ಆರಂಭವಾಗಲಿದ್ದು, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಈ ಆದೇಶ ಮಾಡಿದ್ದಾರೆ. ನಾಲ್ಕು ಆಷಾಢ ಶುಕ್ರವಾರ ಹಾಗೂ ಎರಡು ಅಮಾವಾಸ್ಯೆ ದಿನ ನಿರ್ಬಂಧ ಹಾಕಲಾಗಿದೆ.
ಆಷಾಢ ಮಾಸದ ಶನಿವಾರ ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ನಿರ್ಬಂಧ ಇದ್ದು, ಇಂದಿನಿಂದ ಪ್ರತಿದಿನ ಸಂಜೆ 6 00 ಗಂಟೆಯ ನಂತರವೂ ನಿರ್ಬಂಧವಿದೆ.




