ರೈತನ ಮನೆಯ ಬಾಗಿಲಿಗೆ ಬಂದ ಮೊಸಳೆ ಮರಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬೆಳಗಾವಿ : ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದ ನಿವಾಸಿಯೊಬ್ಬರ ಮನೆಯ ಪಕ್ಕದಲ್ಲಿ ಮೊಸಳೆ ಮರಿ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವಾರಣ ಸೃಷ್ಟಿಸಿದೆ. ಮನೆಯ ಪಕ್ಕ ಮೊಸಳೆ ಮರಿ ಪ್ರತ್ಯಕ್ಷವಾದರಿಂದ ತಾಯಿಯು ಕೂಡ ಇದೇ ವ್ಯಾಪ್ತಿಯಲ್ಲಿ ಸಂಚರಿಸುತ್ತಿರಬಹುದು. ಮನೆಯ ಪಕ್ಕ ಜಮೀನು ಇರುವುದರಿಂದ ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆ ಹಿಡಿಯುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಮೊಸಳೆಗಳ ಭೀತಿಯಿಂದ ನದಿಯ ಪಕ್ಕ ಜಮೀನ ಇರುವ ರೈತರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ರೈತರು ಓಡಾಡಲು ಭಯ ಪಡುವಂತಾಗಿದೆ. ಅಲ್ಲದೇ ಈಗ ಭತ್ತ ಕಟಾವಿಗೆ ಬಂದಿದ್ದು, ಹಗಲು ರಾತ್ರಿ ವೇಳೆ ಗದ್ದೆ ಮತ್ತು ಮನೆಗೆ ಹಳ್ಳದ ಪಕ್ಕದಲ್ಲೆ ಓಡಾಡುತ್ತಿದ್ದು ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ರೈತರಲ್ಲಿ ಜೀವ ಭಯ ಕಾಡುತ್ತಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
2019ರ ಪ್ರವಾಹ ಬಳಿಕ ಸಾವಳಗಿಯ ಘಟಪ್ರಭಾ ನದಿಯಲ್ಲಿ ಸುಮಾರು 28 ಮೊಸಳೆ ಮರಿಗಳು ಪತ್ತೆಯಾದ ವರದಿಯಾಗಿದೆ. ಇದರ, ತಾಯಿ ಕೂಡ ಪ್ರತ್ಯಕ್ಷವಾದ ಕುರುವುಗಳಿವೆ, ಆ ಬಳಿಕ ಸಾಕಷ್ಟು ಮರಿ ಸಾವಳಗಿಯ ಮಾಳೆ ನದಿಯಲ್ಲಿ ಯುವಕರಿಗೆ ಸಿಕ್ಕಿವೆ. ಈ ಭೀತಿ ಹಿನ್ನೆಲೆ ಗ್ರಾಮಸ್ಥರು ಮೊಸಳೆಯನ್ನು ಬಂಧಿಸುವಂತೆ ಆಗ್ರಹಿಸಿದರು. ಆದರೆ, ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ಅಪೂರ್ಣ ಮಾಡಿದ್ದರು. ಮತ್ತೆ, ಗ್ರಾಮಸ್ಥರ ಮನೆಯ ಮುಂದೆ ಮೊಸಳೆ ಮರಿ ಪ್ರತ್ಯಕ್ಷವಾಗಿದ್ದು ಭೀತಿ ಹುಟ್ಟಿಸುತ್ತಿದೆ.
ಗ್ರಾ. ಪಂ ಸದಸ್ಯ ಧರೆಪ್ಪಾ ಮಗದುಮ್ಮ ಮಾತನಾಡಿ, ಮೊಸಳೆ ಮರಿ ಪ್ರತ್ಯೇಕವಾದ ಬಳಿಕ ಸ್ಥಳೀಯರಲ್ಲಿ ಆತಂಕ ಮೂಡಿದೆ. ಮರಿ ಕಾಣಿಸಿಕೊಂಡಿದೆ ತಾಯಿಯು ಇದೇ ಜಮೀನನಲ್ಲಿ ಇರುವ ಶಂಕೆ ವ್ಯಕ್ತವಾಗುತ್ತಿದೆ. ಸಂಬಂಧ ಪಟ್ಟ ಅರಣ್ಯಾಧಿಕಾರಿಗಳು ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನದಿಯ ದಡದಲ್ಲಿ ಬಟ್ಟೆ ತೊಳೆಯುವ ಮಹಿಳೆಯರು ಹಾಗೂ ಜಮೀನಿಗೆ ಹೋಗುವ ರೈತರು ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕಿದೆ. ಮೊಸಳೆ ಕಂಡಾಕ್ಷಣ ಗ್ರಾ. ಪಂ ಗೆ ಮಾಹಿತಿ ರವಾನಿಸಿ ಎಂದು ಮನವಿ ಮಾಡಿಕೊಂಡರು.




