
ಬೆಂಗಳೂರು: ಸಚಿವ ಶ್ರೀರಾಮುಲು ಅವರ ಆಪ್ತ ಎನ್ನಲಾದ ರಾಜಣ್ಣ ಎಂಬ ವ್ಯಕ್ತಿಯನ್ನು ಹೆಸರು ದುರ್ಬಳಕೆ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಂಧಿಸಿದ್ದು, ಎಫ್ಐಆರ್ ದಾಖಲಿಸಿದ್ದಾರೆ.
ತಮಗೆ ಹೇಳದೆ ಕೇಳದೆ ಬಂಧಿಸಿದ್ದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ವಿಜಯೇಂದ್ರ ಹೆಸರು ಹೇಳಿಕೊಂಡು ಹಣಕ್ಕೆ ಬೇಡಿಕೆಯಿಡುತ್ತಿದ್ದರು ಎಂಬುದು ರಾಜಣ್ಣ ಮೇಲೆ ಬಂದಿರುವ ಆರೋಪ. ಆದರೆ, ಬಂಧನಕ್ಕೆ ಮೊದಲು ಈ ಬಗ್ಗೆ ಶ್ರೀರಾಮುಲು ಅವರಿಗೆ ಯಾವ ಮಾಹಿತಿಯೂ ಇರಲಿಲ್ಲ ಎಂಬುದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದ ಎದುರು ಮಾತನಾಡಿದ ವೇಳೆ, ತಮಗೆ ಈ ಬಗ್ಗೆ ಏನೂ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ನೋಡಿಯೇ ತಿಳಿದುಕೊಂಡೆ. ವಿಜಯೇಂದ್ರ ಅವರೂ ಕೂಡ ಈ ಬಗ್ಗೆ ತಮಗೆ ತಿಳಿಸಲಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.
ರಾಜಣ್ಣ ನನಗೆ ಗೊತ್ತಿರುವ ಹುಡುಗ. ಒಂದು ವೇಳೆ ಆತ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೆ ಅದರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು. ವಿಜಯೇಂದ್ರ ಜೊತೆ ಮಾತನಾಡುವೆ ಎಂದರು.
ಈ ನಡುವೆ, ಶ್ರೀರಾಮುಲು ಅವರಿಗೆ ಅಸಮಾಧಾನವಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದು, ಅವರನ್ನು ಕರೆಸಿ ಮಾತನಾಡಲು ಸಿಎಂ ಮುಂದಾಗಿದ್ದಾರೆ ಎಂಬ ವರದಿಗಳೂ ಇವೆ.
ಇದನ್ನೂ ಓದಿ: ಭಿನ್ನ ಬಣದ ಶ್ರೀರಾಮುಲುಗೆ ಬಿಎಸ್ವೈ ಎದಿರೇಟು; ಇದು ಆಪ್ತನ ಬಂಧನದ ಅಸಲಿಯತ್ತು!



