ಕರ್ನಾಟಕದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಿದಂತೆ ಚುನಾವಣಾ ಆಯುಕ್ತರನ್ನು ನೇಮಿಸಬೇಕು: ದಿನೇಶ್ ಗುಂಡೂರಾವ್

ಬೆಂಗಳೂರು: ಇಂದು ದೇಶದ ಅತ್ಯುಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗವ ಒಂದು ದುರ್ಬಲ ಸಂಸ್ಥೆ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮಾಡಿದ್ದಾರೆ.
ಗೋವಾ, ಪುದುಚೆರಿ ಮತ್ತು ತಮಿಳುನಾಡು ರಾಜ್ಯಗಳ ಜವಾಬ್ದಾರಿಯನ್ನು ಹೊಂದಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗವನ್ನು ದುರ್ಬಲ ಸಂಸ್ಥೆ ಎಂದು ಕರೆದದ್ದನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಗುಂಡೂರಾವ್,’ಚುನಾವಣಾ ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಎಂದು ಎನಿಸುತ್ತಿದೆ. ಚುನಾವಣಾ ಆಯೋಗ ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಅದು ಈ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು. ಚುನಾವಣಾ ಆಯೋಗ ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಠುರವಾಗಿ ನಡೆದುಕೊಂಡಿದೆ? ಕೇಂದ್ರ ಸಚಿವ ಸಂಪುಟ ತಮಗೆ ಯಾರು ಅತಿ ಹೆಚ್ಚು ನಿಷ್ಟರೋ, ಯಾರು ತಮ್ಮ ಮಾತು ಚಾಚೂ ತಪ್ಪದೆ ಪಾಲಿಸುತ್ತಾರೋ ಅಂತಹ ಜಿ ಹುಜೂರ್ ಮನಃಸ್ಥಿತಿಯವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತದೆ’ ಎಂದು ಆರೋಪಿಸಿದ್ದಾರೆ.
‘ಇಂತಹ ಆಯುಕ್ತರು ತಮಗೆ ಹುದ್ದೆ ಕಲ್ಪಿಸಿದ ಸರ್ಕಾರಕ್ಕೆ ಮುಜುರೆ ಸಲ್ಲಿಸುವುದು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆಯಂತೆ ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಬೇಕು. ಇಲ್ಲವೇ ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕದ ಮಾನದಂಡದಂತೆ ಆಯುಕ್ತರನ್ನು ನೇಮಿಸಬೇಕು. ಹಾಗಾದಾಗ ಮಾತ್ರ ಆಯೋಗ ಸಮರ್ಥವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
